ಬೆಂಗಳೂರು prajakiran.com : ಮಹಾಮಾರಿ ಕರೋನಾಅಟ್ಟ ಹಾಸ ಭಾನುವಾರವೂ ಮುಂದುವರೆದಿದ್ದು, ಬರೋಬ್ಬರಿ 130 ಜನರಿಗೆ ಒಂದೇ ದಿನ ವಕ್ಕರಿಸಿಕೊಂಡಿದೆ. ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ.
ಇದು ರಾಜ್ಯದ ಸೋಂಕಿತರನ್ನಷ್ಟೇ ಅಲ್ಲದೆ, ಅವರು ಕುಟುಂಬಸ್ಥರನ್ನು ಕೂಡ ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದರೆ ತಪ್ಪಾಗಲಾರದು.
ಭಾನುವಾರ ರಾಜ್ಯದ ಸೋಂಕಿತರ ಸಂಖ್ಯೆ2089ಕ್ಕೆ ಏರಿದೆ. ಈವರೆಗೆ ಒಟ್ಟು 654 ಸೋಂಕಿತರು ಗುಣಮುಖ ರಾಗಿದ್ದು, ಸಮಾಧಾನದ ಸಂಗತಿಯೆಂದರೆ ಇಂದು ಒಂದೇ ದಿನ 46 ಜನ ಗುಣಮುಖರಾಗಿದ್ದಾರೆ.
ಅಲ್ಲದೆ, ಒಟ್ಟು 1391 ಜನ ರಾಜ್ಯದ ವಿವಿಧ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಸಾವನ್ನಪ್ಪಿದ್ದವರ ಸಂಖ್ಯೆ 42ಕ್ಕೆ ಏರಿದೆ. ಇನ್ನೂ 17 ಜನ ಐಸಿಯುನಲ್ಲಿ ವೆಂಟಿಲೇಟರ್ ಮೇಲಿದ್ದಾರೆ. ಇಬ್ಬರು ವಿದೇಶದಿಂದ ಬಂದವರಿಗೆ ಕೂಡ ಭಾನುವಾರ ಸೋಂಕು ಕಾಣಿಸಿಕೊಂಡಿದೆ.
ಇವತ್ತು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಕೇವಲ ಒಂದೇ ಒಂದು ಪ್ರಕರಣ ಕಂಡು ಬಂದಿದೆ. ಆ ಮೂಲಕ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 266 ಸೋಂಕಿತರಿದ್ದು, ಈವರೆಗೆ 130 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಇನ್ನೂ 127 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸಾವನ್ನಪ್ಪಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ಇವತ್ತು ಮತ್ತೇ 15 ಪ್ರಕರಣ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 252ಕ್ಕೆ ಏರಿದಂತಾಗಿದೆ. ಈವರೆಗೆ 26 ಜನ ಗುಣಮುಖರಾಗಿದ್ದರೆ ಇನ್ನೂ 226 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ರೀತಿ ಕಲಬುರಗಿಯಲ್ಲಿ ಭಾನುವಾರ ಮತ್ತೇ 6 ಪ್ರಕರಣ ಕಂಡು ಬಂದಿವೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 141 ಪ್ರಕರಣಕ್ಕೆ ಏರಿದ್ದು,ಅದರಲ್ಲಿ 62 ಜನ ಗುಣಮುಖರಾಗಿದ್ದು, 72 ಜನ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಈವರೆಗೆ 7 ಜನ ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇವತ್ತು ಒಂದೇ ದಿನ 27 ಪ್ರಕರಣ ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 126 ಜನಕ್ಕೆ ಏರಿದೆ. ಇದರಲ್ಲಿ ಈವರೆಗೆ 46 ಜನ ಗುಣಮುಖರಾಗಿದ್ದು, 75 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ ಮತ್ತೆ 4 ಜನ ಸೋಂಕಿತರು ಪತ್ತೆಯಾಗಿದ್ದು, ಒಟ್ಟು 125 ಸೋಂಕಿತರಾಗಿದ್ದಾರೆ. ಇದರಲ್ಲಿ 45 ಜನ ಗುಣಮುಖರಾಗಿದ್ದು, ಇನ್ನೂ 75 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 4 ಜನ ಸಾವನ್ನಪ್ಪಿದ್ದಾರೆ.
ಯಾದಗಿರಿಜಿಲ್ಲೆಯಲ್ಲಿ ಭಾನುವಾರ ಮತ್ತೇ 24 ಪ್ರಕರಣ ಪತ್ತೆಯಾಗಿದ್ದು, ಕೇವಲ ಎರಡೇ ದಿನದಲ್ಲಿ ಸೋಂಕಿತರ ಸಂಖ್ಯೆ 111 ಕ್ಕೆ ಏರಿಕೆಯಾಗಿದೆ.
ಅದೇ ರೀತಿ ಹಾಸನದಲ್ಲಿ ಭಾನುವಾರ ಮತ್ತೇ 14 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ.
ಗಡಿನಾಡು ಬೀದರ ನಲ್ಲಿ ಮತ್ತೇ 6 ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 85ಕ್ಕೆ ಬಂದು ತಲುಪಿದೆ. ಇದರಲ್ಲಿ 21 ಜನ ಗುಣಮುಖರಾಗಿದ್ದು, 62 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಾವಳಿಯಲ್ಲಿ ಕರೋನಾಅಟ್ಟಹಾಸ ಮುಂದುವರೆದಿದ್ದು, ಉಡುಪಿಯಲ್ಲಿ ಭಾನುವಾರ ಒಂದೇ ದಿನ 23 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 76ಕ್ಕೆ ಬಂದು ತಲುಪಿದೆ.
ಇದರಲ್ಲಿ 3 ಜನ ಗುಣಮುಖರಾಗಿದ್ದು, 72 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಉತ್ತರಕನ್ನಡ 2, ತುಮಕೂರು 2, ಶಿವಮೊಗ್ಗ 2, ಕೊಡಗು, ದಕ್ಷಿಣ ಕನ್ನಡ, ವಿಜಯಪುರ, ಧಾರವಾಡದಲ್ಲಿ ತಲಾ ಒಂದು ಪ್ರಕರಣ ಬಂದಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ.