ಧಾರವಾಡ prajakiran.com : ಪಶ್ಚಿಮ ಪದವೀಧರ ಕ್ಷೇತ್ರದ ನಾಮಪತ್ರ ಸಲ್ಲಿಸಲು ಬಂದ ಬಿಜೆಪಿ ಮುಖಂಡರಿಗೆ ಒಂದು ನಿಯಮ ಕರ್ನಾಟಕ ರಾಷ್ಟ್ರೀಯ ಸಮಿತಿ ಕಾರ್ಯಕರ್ತರಿಗೆ ಒಂದು ನಿಯಮ ಅನುಸರಿಸಿದ ಧಾರವಾಡ ಪೊಲೀಸರ ವರ್ತನೆ ವಿರುದ್ದ ಕೆ ಆರ್ ಎಸ್ ಕಾರ್ಯಕರ್ತರು ಮಿಂಚಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಯಿತು. ಜಿಲ್ಲಾಧಿಕಾರಿ ಕಚೇರಿಯ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜನ ಗುಂಪು ಗುಂಪಾಗಿ ಸೇರುವಂತಿಲ್ಲ ಎಂದು ಪೊಲೀಸರು ಬೆಳಗ್ಗೆ ಅವರನ್ನು ಹೊರ ಹಾಕಿದ್ದರು.
ಆದರೆ ಮಧ್ಯಾಹ್ನದ ವೇಳೆಗೆ ಬಿಜೆಪಿ ಹಲವು ಮುಖಂಡರು ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಲು ಪೊಲೀಸರು ಮುಕ್ತಅವಕಾಶ ನೀಡಿದ್ದಕ್ಕೆ ಗರಂ ಆದರು.
ನಾಮಪತ್ರ ಸಲ್ಲಿಕೆಗೆ ಬಿಜೆಪಿಗೆ ಒಂದು ನಿಯಮ ಸಣ್ಣ ಪಕ್ಷ ಕೆ ಆರ್ ಎಸ್ ಗೆ ಒಂದು ನಿಯಮವಿದೆ. ಈ ರೀತಿ ಪೊಲೀಸರು ಆಡಳಿತ ರೂಢ ಸರಕಾರದ ಪರವಾಗಿ ವರ್ತಿಸಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ಘೋಷಣೆ ಕೂಗಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಈ ವೇಳೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಒಳಹೋಗಲು ಕೆಲ ಕಾಲ ಪರದಾಡಿದರು. ರೋಣ ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರನ್ನು ಪೊಲೀಸರು ಗೇಟ್ ಬಳಿ ತಡೆಹಿಡಿದರು. ಆಗ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹೊರಗಡೆ ಆಗಮಿಸಿ ಜಿ.ಎಸ್. ಪಾಟೀಲರನ್ನು ಒಳಹೋಗಲು ಅನುವು ಮಾಡಿಕೊಟ್ಟರು.
ಆದರೆ ಇದಕ್ಕೂ ಮುನ್ನ ಸಚಿವರು, ಶಾಸಕರು, ಬಿಜೆಪಿಯ ಹತ್ತಾರು ಮುಖಂಡರು ತಮ್ಮ ವಾಹನ ಸಮೇತ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ಮಾಡಿದಕ್ಕೆ ಪೊಲೀಸರ ಆಕ್ಷೇಪ ವ್ಯಕ್ತಪಡಿಸದಕ್ಕೆ ಕೆ ಆರ್ ಎಸ್ ಕಾರ್ಯಕರ್ತರು ಪೊಲೀಸರ ಹಾಗೂ ಧಾರವಾಡ ಜಿಲ್ಲಾಡಳಿತದ ವಿರುದ್ದ ಗರಂ ಆದರು.
ಅಲ್ಲದೆ, ಪೊಲೀಸರು ಹಾಗೂ ಬಿಜೆಪಿ ಮುಖಂಡರ ಸಮ್ಮುಖದಲ್ಲಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಹಾಗೂ ಮುಖಂಡರು ಮೌನಕ್ಕೆ ಶರಣಾಗಿದ್ದು ಕಂಡು ಬಂತು.