ಜಗತ್ತೇ ಶ್ಲಾಘಿಸುತ್ತಿರುವ ನಾರಿಶಕ್ತಿ ವಂದನ್ ಅಧಿನಿಯಮ ರಾಹುಲ್ ಗಾಂಧಿಗೆ ಅರ್ಥವೇ ಆಗಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯ
ಹುಬ್ಬಳ್ಳಿ, ಸೆ.22 : ನಾರಿಶಕ್ತಿ ವಂದನ್ ( ಮಹಿಳಾ ಮೀಸಲಾತಿ ) ಅಧಿನಿಯಮದ ಪ್ರತಿಯನ್ನು ಓದದ ರಾಹುಲ್ ಗಾಂಧಿ ಯಾರೋ ಹೇಳಿದ್ದನ್ನ ಕೇಳಿಕೊಂಡು ರಾಜಕೀಯ ಟೀಕೆ ಮಾಡ್ತಿದ್ದಾರೆ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ರು.
ಧಾರವಾಡದಲ್ಲಿಂದು ಮಾತನಾಡಿದ ಅವರು, ನಾರಿಶಕ್ತಿ ವಂದನ್ (ಮಹಿಳಾ ಮೀಸಲಾತಿ) ಕಾಯ್ದೆಯಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ. ಈ ಕಾಯ್ದೆಯು ವಾಸ್ತವದಲ್ಲಿ ಜಾರಿ ಆಗೋದ್ರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ರಾಹುಲ್ ಗಾಂಧಿ ಮಾತ್ರ ಯಾಕೆ ಹೀಗೆ ಟೀಕೆ ಮಾಡ್ತಾರೆ ಅಂದ್ರೆ ಅವರು ಸ್ವತಃ ಕಾಯ್ದೆಯ ಪ್ರತಿ ಓದುವುದಿಲ್ಲ. ಯಾರೋ ಟ್ವೀಟ್ ಮಾಡಿದ್ದನ್ನ ನೋಡಿಕೊಂಡು ಮಾತಾಡ್ತಾರೆ. ಆದರೆ ಈ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಗತ್ತಿನ ಅನೇಕ ರಾಷ್ಟ್ರಗಳು ಶ್ಲಾಘಿಸುತ್ತಿವೆ. ಇದಕ್ಕೆ ದೃಷ್ಟಾಂತವೆಂದರೆ ನಿನ್ನೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಕೊಠಡಿಗೆ ಬಂದ ವಿದೇಶ ನಿಯೋಗ ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಮಹತ್ಕಾರ್ಯವನ್ನ ನರೇಂದ್ರ ಮೋದಿಯವರು ಮಾತ್ರ ಮಾಡಲು ಸಾಧ್ಯ ಎಂದರು. ಆದರೆ ರಾಹುಲ್ ಗಾಂಧಿಗೆ ಇದ್ಯಾವುದೂ ಅರ್ಥವೇ ಆಗಲ್ಲ ಅಂತ ಪ್ರಲ್ಹಾದ ಜೋಶಿಯವರು ವ್ಯಂಗ್ಯವಾಡಿದರು.
ನಾರಿ ಶಕ್ತಿ ವಂದನ್ ಅಧಿನಿಯಮದಿಂದಾಗಿ ಕರ್ನಾಟಕ ವಿಧಾನಸಭೆಗೆ ಕನಿಷ್ಠವೆಂದರೂ 66 ಮಹಿಳೆಯರು ಸದಸ್ಯರಾಗಿ ಬರಲಿದ್ದಾರೆ. ಪ್ರಧಾನಮಂತ್ರಿಯವರ ಈ ದೂರದರ್ಶಿ ನಾಯಕತ್ವಕ್ಕೆ, ಉದಾತ್ತ ಚಿಂತನೆಗೆ, ರಾಜಕೀಯ ಇಚ್ಛಾಶಕ್ತಿಗೆ ದೇಶ, ರಾಜ್ಯ ಹಾಗೂ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಸಮಸ್ತರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಲ್ಹಾದ ಜೋಶಿಯವರು ಹೇಳಿದರು.