* ಬಿಎಸ್ವೈ ಸೇರಿ ಹಲವು ನಾಯಕರ ಸಾಥ್*
*ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ಸಾಥ್*
*ಧಾರವಾಡ ಶಿವಾಜಿ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ರೋಡ್ ಶೋ*
*ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದ ಪ್ರಹ್ಲಾದ ಜೋಶಿ*
ಧಾರವಾಡ ಪ್ರಜಾಕಿರಣ.ಕಾಮ್ : ಹಾಲಿ ಕೇಂದ್ರ ಸಚಿವರೂ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಸೋಮವಾರ ಸಾವಿರಾರು ಅಭಿಮಾನಿಗಳ ಹಾಗೂ ಕಾರ್ಯರ್ತರ ಬೃಹತ್ ರೋಡ್ ಶೋ ಮುಖಾಂತರ ಐದನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗಾಗಿ ನಾಮಪತ್ರ ಸಲ್ಲಿಸಿದರು.
ಧಾರವಾಡದ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮುಖಾಂತರ ತೆರೆದ ವಾಹನದ ಮೂಲಕ ಧಾರವಾಡ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ರೋಡ್ ಶೋ ನಡೆಸಿದರು.
ಪ್ರಹ್ಲಾದ ಜೋಶಿ ಅವರ ಈ ರೋಡ್ ಶೋಗೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ,
ಶಾಸಕರಾದ ಅರವಿಂದ ಬೆಲ್ಲದ, ಸಿ.ಸಿ.ಪಾಟೀಲ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು.
ಬಿರು ಬಿಸಿಲನ್ನೂ ಲೆಕ್ಕಿಸದ ಕಾರ್ಯಕರ್ತರು ನರೇಂದ್ರ ಮೋದಿ ಹಾಗೂ ಪ್ರಹ್ಲಾದ ಜೋಶಿ ಜಯಘೋಷ ಮುಗಿಲು ಮುಟ್ಟಿದ್ದವು.
ಅವರಿಗೆ ಜಾಂಜ್ ಮೇಳ, ಬೊಂಬೆ ಕುಣಿತ, ಜಗ್ಗಲಿಗೆ ಮೇಳ, ಡಿಜೆ ಅಬ್ಬರಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಶಿವಾಜಿ ವೃತ್ತದಿಂದ ಆರಂಭವಾದ ಈ ಬೃಹತ್ ರೋಡ್ ಶೋ ಸಿಬಿಟಿ ರಸ್ತೆ, ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಅಲ್ಲಿಂದ ಪ್ರಹ್ಲಾದ ಜೋಶಿ ಅವರು ತಮ್ಮ ನಾಯಕರ ಜೊತೆಗೂಡಿ ಬಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ನಾಲ್ಕು ಸೆಟ್ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಬೃಹತ್ ರೋಡ್ ಶೋದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡು ಗಮನಸೆಳೆದರು.
ನಾಮಪತ್ರ ಸಲ್ಲಿಸುವ ಮುನ್ನ ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ಮೃತ್ಯುಂಜಯಪ್ಪಗಳ ಗದ್ದುಗೆಗೆ ನಮಸ್ಕರಿಸಿದರು.
ಆನಂತರ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಲಕ್ಷಾಂತರ ಜನರ ಆಶೀರ್ವಾದ ಕಳೆದ ನಾಲ್ಕು ಅವಧಿಗಳಿಂದ ನನಗೆ ಸಿಕ್ಕಿದೆ. ಈ ಬಾರಿಯೂ ಸಿಗಲಿದೆ. ಹಿಂದಿನ ರೆಕಾರ್ಡ್ ಮುರಿದು ಈ ಬಾರಿ ಗೆಲುವು ದಾಖಲಿಸುತ್ತೇನೆ ಎಂದು
ಬಿಜೆಪಿ ಅಭ್ಯರ್ಥಿ
ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.