ಧಾರವಾಡ prajakiran.com : ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಖಾದಿ ಉತ್ಪನ್ನ ಕೇಂದ್ರಗಳಿಗೆ ಬರಬೇಕಾದ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ವಾರದಲ್ಲಿ ಒಂದು ದಿನ ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ಖಾದಿ ಬಟ್ಟೆಗಳನ್ನು ಧರಿಸುವಂತೆ ಸರ್ಕಾರ ನಿಯಮವನ್ನು ಜಾರಿಗೆ ತರಬೇಕು.
ಇಲ್ಲದೇ ಹೋದರೆ ಖಾದಿ ಉಳಿವಿಗಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಎಚ್ಚರಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ದೇಶದ ಜನರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಧಾರಣೆ ಆಗಬೇಕಾದರೆ ಗುಡಿ ಕೈಗಾರಿಕೆ ಹಾಗೂ ಖಾದಿ ಭಂಡಾರಗಳ ಅಭಿವೃದ್ಧಿಗೆ ಸರ್ಕಾರ ಪ್ರಾಮುಖ್ಯತೆ ನೀಡಬೇಕು.
ಭಾರತದ ಧ್ವಜದ ಬಟ್ಟೆಯನ್ನು ಸಿದ್ಧಪಡಿಸುವ ಖಾದಿ ಕೇಂದ್ರಗಳು ಹಲವು ನೋವು ನಲಿವುಗಳನ್ನು ಅನುಭವಿಸುತ್ತಿರುವುದು ಕಂಡುಬಂದಿದೆ.
ಖಾದಿ ಕೇಂದ್ರಗಳ ಹಾಗೂ ನೇಕಾರರ ಏಳ್ಗೆಗಾಗಿ ಸರ್ಕಾರ ಅನುದಾನ ನೀಡಬೇಕು ಅವುಗಳ ಪುನಶ್ಚೇತನಕ್ಕಾಗಿ ಹೊಸ ಯೋಜನೆ ರೂಪಿಸಲು ಮುಂದಾಗಬೇಕು ಎಂದರು
ಕೊಪ್ಪಳದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಶೈಲಜಾ ಹಿರೇಮಠ ಮಾತನಾಡಿ, ಇತ್ತೀಚೆಗೆ ಬಂದ ಅನೇಕ ವಿಧದ ಬಟ್ಟೆಗಳಿಗೆ ಈ ದೇಶದಲ್ಲಿ ದೊಡ್ಡ ಮಾರುಕಟ್ಟೆಗಳು ನಿರ್ಮಾಣವಾಗಿವೆ.
ಆದರೆ, ಇದೇ ದೇಶದಲ್ಲಿ ಸಿದ್ಧಪಡಿಸಲಾಗುವ ಖಾದಿ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೇ ಇರುವುದು ದುರದೃಷ್ಟಕರ. ಸರ್ಕಾರ ಕೂಡಲೇ ಖಾದಿ ಕೇಂದ್ರಗಳ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸಿಬಿಐನಿಂದ ವಿನಯ ಕುಲಕರ್ಣಿ ಬಂಧನ ವಿಚಾರ ಕುರಿತು
ಧಾರವಾಡದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಪ್ರತಿಕ್ರಿಯೆ ನೀಡಿದ್ದು,
ಕಾನೂನಾತ್ಮಕವಾಗಿ ಏನು ಕ್ರಮ ತೆಗೆದುಕೊಳ್ಳಬೇಕೊ ತೆಗೆದುಕೊಳ್ಳಲಿ.
ಕಾನೂನಿನ ಮುಂದೆ ಎಲ್ಲರೂ ಸಮ.
ಆದರೆ ಸರ್ಕಾರ ಸಂವಿಧಾನಬದ್ಧ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಬಾರದು.
ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸಲಿ
ಉದ್ದೇಶಪೂರ್ವಕವಾಗಿ ತಪ್ಪಿತಸ್ಥರನ್ನು ಮಾಡುವುದು ಆಗಬಾರದು ಎಂದು ಹೇಳಿದರು.