ತುಮಕೂರು prajakiran.com : ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣ ಮಾಡಲು ಆಗುತ್ತಿಲ್ಲ. ಎಲ್ಲೋ ಒಂದು ರೀತಿಯಲ್ಲಿ ಪರಿಸ್ಥಿತಿ ನಮ್ಮ ಕೈ ಮೀರುತ್ತಿದೆ ಎಂದು ಅನಿಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರೋನಾ ಸಮುದಾಯದ ಹಂತಕ್ಕೆ ಹರಡುತ್ತಿದೆಯೇ ಎಂಬ ಆತಂಕ ನಮಗೂ ಶುರುವಾಗಿದೆ ಎಂದು ಹೇಳಿದರು.
ನಮಗೆ ಕರೋನಾ ಸಂಖ್ಯೆಗಿಂತ ಇದು ಸಮುದಾಯದ ಹಂತಕ್ಕೆ ಹೋಗುತ್ತಿರುವುದು ಆಘಾತ ತರುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸಾಕಷ್ಟು ಶ್ರಮ ಹಾಕಿದರೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ಕರೋನಾ ಮುಂದಿನ ಆರು ತಿಂಗಳ ಕಾಲ ನಿಯಂತ್ರಣಕ್ಕೆ ಬರುವುದು ಕಷ್ಟ ಸಾಧ್ಯವೇನು ಅನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅಧಿಕಾರಿಗಳು ಯಾವುದೇ ಮೀನಾಮೇಷ ಮಾಡಿದೆ ರೋಗಿಗಳಿಗೆ ಧೈರ್ಯ ಕೊಡಿ, ನಿಮ್ಮೊಂದಿಗೆ ನಾವಿದ್ದೇವೆ. ನಾವು ಅಲ್ಲಿಗೆ ಬರುತ್ತೇವೆ ಎಂದು ಆತ್ಮವಿಶ್ವಾಸ ತುಂಬಿ. ಯಾರೊಬ್ಬರನ್ನು ನಿರ್ಲಕ್ಷ್ಯಿಸಬೇಡಿ ಎಂದು ಹೇಳಿದರು.
ರಾಜ್ಯದ ರಾಜಧಾನಿಯಲ್ಲಂತೂ ಪರಿಸ್ಥಿತಿ ಕೈ ಮೀರಿದ್ದು, ಪ್ರತಿನಿತ್ಯ ಸಾವಿರ ಗಡಿ ಸಮೀಪಿಸುತ್ತಿದ್ದು, ಜನತೆ ಆತಂಕದಲ್ಲಿಯೇ ದಿನದೂಡುವಂತಾಗಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿರುವುದು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿರುವುದು ಸುಳ್ಳಲ್ಲ.