ಧಾರವಾಡ prajakiran.com : ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಹೆಸರಿನಲ್ಲಿ ಧಾರವಾಡದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮಾಜಿ ಸಚಿವರ ಆಪ್ತನೊಬ್ಬ ಸೇರಿ ಇಬ್ಬರು ಹುಬ್ಬಳ್ಳಿ-ಧಾರವಾಡ ಪೊಲೀಸರ ಬಲೆಗೆ ಭಾನುವಾರ ರಾತ್ರಿ ಬಿದ್ದಿದ್ದಾರೆ.
ಧಾರವಾಡದ ಕಮಲಾಪುರದಲ್ಲಿ ಕಳೆದ ಹಲವು ದಿನಗಳಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿರುವ ಮಾಹಿತಿಯ ಆಧಾರದ ಮೇಲೆ ಅದರ ಬೆನ್ನು ಹತ್ತಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಪಿ. ಕೃಷ್ಣಕಾಂತ, ಆರ್.ಬಿ. ಬಸರಗಿ, ಎಸಿಪಿ ಅನುಷಾ ಜಿ., ಸಿಸಿಬಿ ಇನ್ಸಪೆಕ್ಟರ್ ಗಳಾದ ಎಂ.ಎಂ.ನದಾಫ್, ಅಲ್ತಾಫ್ ಮುಲ್ಲಾ ಹಾಗೂ ಪ್ರಮೋದ ಯಲಿಗಾರ ಮತ್ತು ಸಿಬ್ಬಂದಿ ಈ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಚೀನಿ ಬಸು ಅಲಿಯಾಸ್ ಬಸವರಾಜ ಹೆಬ್ಬಳ್ಳಿ ಹಾಗೂ ಕಿರಣ ಕಾಟ್ಟೆಕರ್ ಎಂದು ಗುರುತಿಸಲಾಗಿದ್ದು, ಅವರಿಂದ 2.15 ಲಕ್ಷ ರೂ. ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಆಗಿದ್ದು, ತನಿಖೆ ಮುಂದುವರೆದಿದೆ.
ನಿನ್ನೇ ರಾತ್ರಿಯೇ ಇಬ್ಬರು ಆರೋಪಿಗಳಿಗೆ ಪೊಲೀಸರು ಸರಿಯಾಗಿ ಬಿಸಿ ತಾಕಿಸಿರುವ ಕುರಿತು ಗುಸು ಗುಸು ಪಿಸು ಪಿಸು ಮಾತುಗಳು ಕೇಳಿ ಬರುತ್ತಿದ್ದವು.
ಮಾಜಿ ಸಚಿವರ ಜೊತೆಗೆ ಗುರುತಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿರುವುದು ಇನ್ನುಳಿದ ಆರೋಪಿಗಳಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.