ಧಾರವಾಡ prajakiran.com : ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿವಿಧ ಪದವಿ ಕಾಲೇಜುಗಳ ಹಾಸ್ಟೆಲ್ ರಿಪೇರಿ ಹೆಸರಿನಲ್ಲಿ ನೂರಾರು ವಿದ್ಯಾರ್ಥಿಗಳನ್ಬು ಇಪ್ಪತ್ತು ದಿನಗಳ ಮಟ್ಟಿಗೆ ಅನಧಿಕೃತವಾಗಿ ಹೊರಹಾಕಲು ಯತ್ನಿಸುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ಆತಂಕಗೊಂಡಿದ್ದು, ದಿಕ್ಕು ತೊಚದಂತೆ ಕಂಗಲಾಗಿದ್ದಾರೆ.
ಇನ್ನು ಕೆಲವರು ತಮ್ಮ ಗೆಳೆಯರ ಕೊಠಡಿಗಳಲ್ಲಿ ತಾತ್ಕಾಲಿಕವಾಗಿ ವಸತಿ ಹೂಡಲು ಪರದಾಟ ನಡೆಸುತ್ತಿರುವ ಮಾಹಿತಿ ಪ್ರಜಾಕಿರಣ.ಕಾಮ್ ಗೆ ಲಭಿಸಿದೆ.
ಅನೇಕ ವಿದ್ಯಾರ್ಥಿಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಎಂದು ಹೆಸರು ಬಹಿರಂಗ ಪಡಿಸಲು ನಿರಾಕರಿಸಿದ ವಿದ್ಯಾರ್ಥಿಗಳು ತಮ್ಮ ಅಳಲನ್ನು ಪ್ರಜಾಕಿರಣ. ಕಾಮ್ ಬಳಿ ತೊಡಗಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿರುವ
ವಿದ್ಯಾರ್ಥಿಗಳ ಮುಖಂಡ ಸುರೇಶ್ ಕೊರಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿನಾ ಒಂದಿಲ್ಲೊಂದು ಭ್ರಷ್ಟಾಚಾರದ ಅವಾಂತರ ಸದ್ದಿಲ್ಲದೆ ನಡೆಯುತ್ತಲೇ ಇರುತ್ತವೆ ಎಂಬುದಕ್ಕೆ ಇದು ನಿರ್ದಶನ ಎಂದು ಕಿಡಿಕಾರಿದರು.
ಧಾರವಾಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಎಂ.ಬಿ. ಸಣ್ಣೇರಿ ಅವರು ಗ್ರೇಡ್ ಟು ಅಧಿಕಾರಿಯಾಗಿದ್ದರೂ ಹಲವರ ಪ್ರಭಾವ ಬೀರಿ ಗ್ರೇಡ್ ಒನ್ ಹುದ್ದೆಯಲ್ಲಿ ಹಲವು ವರ್ಷಗಳಿಂದ ಬಿಡಾರ ಹೂಡಿದ್ದಾರೆ.
ಇಲಾಖೆಯಲ್ಲಿ ಅವರು ಆಡಿದ್ದೆ ಆಟ, ಮಾಡಿದ್ದೆ ನೀತಿ, ನಿಯಮ, ಕಾನೂನು ಎನ್ನುವಂತಾಗಿದೆ ಎಂದು ಸುರೇಶ ಕೊರಿ ದೂರಿದ್ದಾರೆ.
ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಕಣ್ಣು ಮುಚ್ಚಿ ಕುಳಿತುಕೊಂಡಿರುವ ದುರಂತದ ಸಂಗತಿಯಾಗಿದೆ ಎಂದು ಆರೋಪಿಸಿದರು.
ಅಲ್ಲದೆ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕ ದುರಸ್ತಿ ಮಾಡುವುದು ಬಿಟ್ಟು ಅವರನ್ನು ಬಲವಂತವಾಗಿ ಅದು ಅನಧಿಕೃತವಾಗಿ ಹೊರಹಾಕಲು ಪ್ರಯತ್ನಿಸಿದರೆ ವಿದ್ಯಾರ್ಥಿಗಳ ಜೊತೆಗೆ ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಬಗ್ಗೆ ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಂಬರ್ ಅವರನ್ನು ಪ್ರಜಾಕಿರಣ. ಕಾಮ್ ಸಂಪರ್ಕಿಸಿದರೆ, ಸದ್ಯ ಯಾವುದೇ ಹಾಸ್ಟೆಲ್ ರಿಪೇರಿ ಇಲ್ಲ. ಹಾಗೆ ವಿದ್ಯಾರ್ಥಿಗಳನ್ನು ಹೊರಹಾಕಲು ಅವಕಾಶ ಕೂಡ ಇಲ್ಲ ಎಂದು ಹೇಳಿದರು.
ಈ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಈ ಬಗ್ಗೆ ಇಲಾಖೆಯ ಕೆಳ ಹಂತದ ಅಧಿಕಾರಿಗಳ ಬಳಿ ವಿಚಾರಿಸುವುದಾಗಿ ಹೇಳಿದರು.
ಜೊತೆಗೆ ಗ್ರೇಡ್ ಟೂ ಅಧಿಕಾರಿ, ಗ್ರೇಡ್ ಒನ್ ಹುದ್ದೆಯಲ್ಲಿ ಇರುವ ಬಗ್ಗೆ ಮಾಹಿತಿಯೇ ಇಲ್ಲ. ಸರಕಾರ ಆದೇಶ ಹೊರಡಿಸಿದೆ. ಹೀಗಾಗಿ ನಾವೇನು ಮಾಡಲು ಬರಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಾಗಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ವರ್ಗದವರು ಜಾಣ ಕುರುಡು ಜೊತೆಗೆ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಎಲ್ಲಾ ಗೊತ್ತಿದ್ದರೂ ಎನೂ ಗೊತ್ತಿರದವರ ಹಾಗೆ ವರ್ತಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಪ್ರಜ್ಞಾವಂತ ಸಾರ್ವಜನಿಕರಿಗೆ ಕಾಡತೊಡಗಿದೆ.
ಇದಕ್ಕೆ ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ವರ್ಗದವರು ಅದರಲ್ಲೂ ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಕೆಲಸ ಮಾಡಿ ಹೋದವರಾಗಿದ್ದಾರೆ. ಈಗಲಾದರೂ ಅವರು ಸಕಾರಾತ್ಮಕವಾಗಿ ಸ್ಪಂದಿಸುವರೆ ಕಾದುನೋಡಬೇಕಿದೆ.