ಧಾರವಾಡ prajakiran.com : ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹತ್ತಾರು ಮನೆಗಳಿಗೆ ನೀರು ನುಗ್ಗಿದಲ್ಲದೆ, ಮೂರು ಕಾಂಪೌಂಡ್ ಗೊಡೆ ಕುಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಶಿವಾನಂದ ನಗರದ ನಾಲ್ಕನೇ ಕ್ರಾಸ್ ನಲ್ಲಿರುವ ಗಿರಡ್ಡಿ ವಕೀಲರ ಮನೆ ಹಾಗೂ ಶಂಕರ ಹಲಗತ್ತಿಯವರ ಮನೆ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಇದಕ್ಕೆ ಟೋಲ್ ನಾಕಾದಲ್ಲಿರುವ ಬಿ ಆರ್ ಟಿ ಎಸ್ ನ ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದ್ದು, ಮುಂದೆ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಟೋಲ್ ನಾಕಾದ ನೀರು ಪಕ್ಕದಲ್ಲಿಯೇ ಇರುವ ಶಿವಾನಂದ ನಗರಕ್ಕೆ ನುಗ್ಗಿದೆ.
ಇದರಿಂದಾಗಿ ಹತ್ತಾರು ಮನೆಗಳು ಜಲಾವೃತವಾಗಿದ್ದು, ಸ್ಥಳೀಯರು ಪರದಾಡುವಂತಾಗಿದೆ. ಈ ಬಾರಿ ನೀರಿನ ರಭಸ ಜೋರಾಗಿದ್ದರಿಂದ ಮೂರು ಮನೆಯ ಕಾಂಪೌಂಡ್ ಗಳು ಕುಸಿದಿವೆ ಎಂದು ಶರಣಗೌಡ ಗಿರಡ್ಡಿಅವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.
ಪ್ರತಿ ಬಾರಿ ದೊಡ್ಡ ಪ್ರಮಾಣದ ಮಳೆ ಬಂದಾಗಲೂ ಈ ರೀತಿ ನೀರು ನುಗ್ಗುವುದು ಮಾಮೂಲಾಗಿದೆ. ಆದರೆ ಬಿ ಆರ್ ಟಿ ಎಸ್ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದಕ್ಕೆ ಮುಕ್ತಿ ಹಾಡಿ ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುದು ಸ್ಥಳೀಯರ ಆಪಾದನೆಯಾಗಿದೆ.
ಬಿ ಆರ್ ಟಿ ಎಸ್ ಆರಂಭವಾದಾಗಿನಿಂದ ಪ್ರತಿ ಸಲ ಮಳೆ ಬಂದಾಗ ಟೋಲ್ ನಾಕಾದಲ್ಲಿ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ವಾಹನ ಸಂಚಾರಕ್ಕೆ ಅಡೆ ತಡೆ ಉಂಟಾಗುತ್ತಿದೆ. ಪ್ರಯಾಣಿಕರು ಕೂಡ ಕಿರಿಕಿರಿ ಅನುಭವಿಸುವಂತಾಗಿದೆ.
ಈ ಬಾರಿಯಾದರೂ ಧಾರವಾಡ ಜಿಲ್ಲಾಡಳಿತ ಹಾಗೂ ಬಿ ಆರ್ ಟಿ ಎಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಾರಾ ಎಂಬುದು ಕಾದು ನೋಡಬೇಕಿದೆ.