ಧಾರವಾಡ prajakiran.com : ಕೋವಿಡ್ 19 ಸೋಂಕು ದಿನದಿಂದ ದಿನಕ್ಕೆ ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆನ್ನ ಹಿಂದೆಯೇ ಆರೋಗ್ಯ ಇಲಾಖೆಯ ಯಡವಟ್ಟುಗಳು ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ.
ಜು. 13ರಂದು ರಕ್ತ ಹಾಗೂ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದ ವ್ಯಕ್ತಿಗೆ ಜು. 16ರಂದು ಕೊರೊನಾ ದೃಢಪಟ್ಟಿದೆ ಎಂದು ಹೇಳಿದ ಆರೋಗ್ಯ ಇಲಾಖೆ, ಕೆಲ ಗಂಟೆಗಳ ನಂತರ ನಿಮ್ಮ ಟೆಸ್ಟಿಂಗ್ ವರದಿ ಇನ್ನೂ ಬಂದೇ ಇಲ್ಲ ಎಂಬ ಸಂದೇಶ ಕಳುಹಿಸುವ ಮೂಲಕ ಯಡವಟ್ಟು ಮಾಡಿಕೊಂಡಿದೆ.
ಹೌದು ಇದು ಅಚ್ಚರಿಯ ಸಂಗತಿಯಾದರೂ ನಂಬಲೇಬೇಕಾದ ಕಟು ಸತ್ಯ. ಇಂತಹ ಘಟನೆ ವಿದ್ಯಾನಗರಿ ಧಾರವಾಡದಲ್ಲಿಯೇ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ಹೆಬ್ಬಳ್ಳಿ ಅಗಸಿಯ ಮನೆಯೊಂದರಲ್ಲಿ ಪ್ರತ್ಯೇಕವಾಗಿರುವ ಎನ್ ಡಬ್ಲ್ಯೂ ಕೆಎಸ್ ಆರ್ ಟಿಸಿ ಸಿಬ್ಬಂದಿಯೊಬ್ಬರು ಸೋಂಕಿತ ವ್ಯಕ್ತಿಯೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ಕೋವಿಡ್ ತಪಾಸಣೆಗೆ ಒಳಗಾಗಿದ್ದರು.
ಆದರೆ ಭಾನುವಾರ ಸಂಜೆಯವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಕರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಎನ್ ಡಬ್ಲ್ಯೂ ಕೆ ಎಸ್ ಆರ್ ಟಿಸಿ ನನ್ನ ವರದಿ ಪಾಸಿಟಿವ್ ಇದೆಯೋ ಇಲ್ಲ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಅಂಬುಲೆನ್ಸ್ ಬರುವುದಿರಲಿ, ಆತನ ಆರೋಗ್ಯ ಸ್ಥಿತಿ ಹೇಗೆ ಎಂದು ಜು. 19ರ ತನಕ ಯಾರೊಬ್ಬರು ವಿಚಾರಿಸಿಲ್ಲ.
ಇದರಿಂದ ಕಂಗಾಲಾಗಿರುವ ಆತ ಮತ್ತು ಆತನ ಕುಟುಂಬ ವರ್ಗದವರು ಆತಂಕಕ್ಕೆ ಸಿಲುಕಿದ್ದಾರೆ. ಆ ನೌಕರ ದಿಕ್ಕು ತೋಚದಂತಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾನೆ. ನಾನು ಕರೋನಾ ಸೋಂಕಿತ ವ್ಯಕ್ತಿಯೋ ಅಥವಾ ಶಂಕಿತ ವ್ಯಕ್ತಿಯೋ ಎಂದು ಪೇಚಾಡುತ್ತಿದ್ದಾನೆ.
ಅಷ್ಟೇ ಅಲ್ಲದೆ, ಅವರ ಮನೆಯ ಅಕ್ಕಪಕ್ಕದ ಜನ ಕೂಡ ಇದರಿಂದಾಗಿ ಭಯಭೀತರಾಗಿದ್ದು, ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಭಾನುವಾರ ಸಂಜೆವರೆಗೂ ಕಾದರೂ ಯಾವುದೇ ಅಂಬ್ಯುಲೆನ್ಸ್ ಬಂದು ಕರೆದುಕೊಂಡು ಹೋಗದಿರುವುದಕ್ಕೆ ಅಸಮಾಧಾನ ಹೊರಹಾಕಿದ ವೀಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ಈಗಲಾದರೂ ಧಾರವಾಡ ಜಿಲ್ಲಾಡಳಿತ ಏಚ್ಚೆತ್ತುಕೊಂಡ ಆದ ಪ್ರಮಾದವನ್ನು ಸರಿಪಡಿಸಿಕೊಳ್ಳತ್ತಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.