ಧಾರವಾಡ prajakiran.com : ಆರ್ಥಿಕ ಕುಸಿತ ಮತ್ತು ಕೋವಿಡ್ ಸಂಕಷ್ಟದ ನಡುವೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
30-ಜೂನ್-2020 ರ ವರೆಗೆ ಜಿಲ್ಲಾ ಆಡಳಿತ ಸಿ.ಆರ್.ಪಿ.ಸಿ. ಕಲಂ 144 ವಿಸ್ತರಿಸಿರುವುದರಿಂದ, ಕೋವಿಡ್ ಸಂಕಷ್ಟದ ದಿನಗಳಲ್ಲಿ ಸರ್ಕಾರದ ನಿಯಮ ಮತ್ತು ನಿರ್ಬಂಧಗಳಿಗೆ ಒಳಪಟ್ಟು ಮತ್ತು ಜನರ ಆರೋಗ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರಕಾರ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಸ್ತಿ ಕರ ಹಿಂಪಡೆಯುವಂತೆ ಜನಸಾಮಾನ್ಯರು, ಸಂಘಟನೆಗಳು ಹಾಗು ಎಎಪಿ ಅನೇಕ ಮನವಿಗಳನ್ನು ಸಲ್ಲಿಸಿದರೂ, ಇದುವರೆಗೂ ಸರಕಾರ ಯಾವುದೇ ಸಕಾರಾತ್ಮಕ ನಿರ್ಣಯ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರಗಳ ಸತತ ಕರ, ಶುಲ್ಕ, ಸುಂಕದ ಹೊರೆ ಹೇರುವ ಜನ ವಿರೋಧಿ ನೀತಿಗಳಿಂದ ಹಾಗು ಹುಸಿ ಆಶ್ವಾಸನೆಗಳಿಂದ ಈಗ ಜನರು ಬಿಜೆಪಿ ಸರಕಾರದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ‘೨೦ ಲಕ್ಷ ಕೋಟಿ ಪರಿಹಾರ’ ಘೋಷಣೆ ಮಾಡಿದರೂ ಅದರ ಲಾಭ ಮಾತ್ರ ಹುಬ್ಬಳ್ಳಿ-ಧಾರವಾಡ ಜನರಿಗೆ ಮುಟ್ಟಲಿಲ್ಲ. ಆಸ್ತಿ ಕರ ಹೆಚ್ಚಳದಿಂದ ಪಾಲಿಕೆಗೆ ಕೇವಲ ೧೨ ಕೋಟಿ ರೂಪಾಯಿ ಆದಾಯ ಹೆಚ್ಚಾಗುವ ಅಂದಾಜು ಇದೆ.
ಅದನ್ನೂ ಕೈ ಬಿಡಲು ಸರಕಾರ ತಯಾರಿಲ್ಲ. ಸರಕಾರ ಕರ ಹೆಚ್ಚಳ ಹಿಂಪಡೆಯದಿದ್ದರೆ, ಜನರ ಮಧ್ಯೆ ಹೋಗಿ ವ್ಯಾಪಕ ಜನಮತ ಸಂಗ್ರಹಣೆ ಮಾಡಿ ಚಳುವಳಿ ಮಾಡುತ್ತೇವೆ ಎಂದು ಎಎಪಿ ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ ಎಚ್ಚರಿಸಿದರು.
ಈ ಕರ ಹೆಚ್ಚಳ ಅನ್ಯಾಯದ ವಿರುದ್ಧ ನಮ್ಮ ಪಕ್ಷ ಜನ ಸಾಮಾನ್ಯರ ಧ್ವನಿಯಾಗಲಿದೆ. ಈ ಪ್ರತಿಭಟನೆ ಆರಂಭವಷ್ಟೇ, ಮುಂಬರುವ ದಿನಗಳಲ್ಲಿ ಜನರ ಬಳಿ ಹೋಗುವ ಕಾರ್ಯಕ್ರಮಗಳ ಮೂಲಕ ಜನ ವಿರೋಧಿ ನೀತಿಗಳನ್ನು ಬಯಲುಗೊಳಿಸುತ್ತೇವೆ ಎಂದು ಪಕ್ಷದ ನಾಯಕ ವಿಕಾಸ ಸೊಪ್ಪಿನ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರ ಮುಖೇನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ರವರಿಗೆ ಜ್ಞಾಪನ ಪತ್ರ ಸಲ್ಲಿಸಲಾಯಿತು.
ಶಶಿಕುಮಾರ ಸುಳ್ಳದ, ವಿವೇಕಾನಂದ ಸಾಲಿನ್ಸ್, ಶಿವಲಿಂಗಪ್ಪ ಜಡೆಣ್ಣವರ, ವಿಜಯ ಸಾಯಿ, ತ್ಯಾಗರಾಜ ಅಲ್ಲಂಪಟ್ಟಿ, ಅನಂತಕುಮಾರ ಭಾರತೀಯ, ಲಕ್ಷ್ಮಣ ರಾಠೋಡ, ಪ್ರತಿಭಾ ದಿವಾಕರ, ಹರಿಕೃಷ್ಣ, ಡೇನಿಯಲ, ರಮೇಶ ಜಮಾದಾರ, ಸ್ಟಾಲಿನ್, ಆದಿತ್ಯ ನಾಯಕ, ನವೀನ ರಜಪೂತ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡರು.