ಸೋಂಕಿತರು ಕೋವಿಡ್ ಕಾಳಜಿ ಕೇಂದ್ರಕ್ಕೆ ಬರುವಂತೆ ಜಾಗೃತಿ
ಧಾರವಾಡ (prajakiran.com) ಮೇ.25: ಧಾರವಾಡ ಜಿಲ್ಲೆಯಲ್ಲಿ ಸುಮಾರು 7000 ಕೋವಿಡ್ ಸಕ್ರೀಯ ಪ್ರಕರಣಗಳಿದ್ದು, ಅದರಲ್ಲಿ ಸುಮಾರು 3700 ಸೋಂಕಿತರು ಹೋಮ್ ಐಸೋಲೆಷನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 17 ಕೋವಿಡ್ ಕೇರ್ ಸೆಂಟರಗಳನ್ನು ಪ್ರಾರಂಭಿಸಲಾಗಿದೆ.
ತಾಲೂಕಾ ಮಟ್ಟದಲ್ಲಿಯೂ ಕೂಡ 100 ಬೆಡ್ ಕೋವಿಡ್ ಕಾಳಜಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಕೂಡ ಕೋವಿಡ್ ಕೇರ್ ಸೆಂಟರಗಳನ್ನು ಸ್ಥಾಪಿಸಲಾಗುತ್ತಿದೆ.
ಆದರೂ ಕೆಲವು ಜನರು ಕೋವಿಡ್ ಕೇರ್ ಸೆಂಟರಗಳಿಗೆ ಆಗಮಿಸಲು ಹಿಂಜರಿಯುತ್ತಿದ್ದಾರೆ.
ಅಂತಹ ಜನರಿಗೆ ಮನವೋಲಿಸಿ ಆರೈಕೆ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಕರೆದುಕೊಂಡು ಬರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಮ್ಮ ಅಧಿಕಾರಿಗಳು ಸೋಂಕಿತರ ಮನೆ ಭೇಟಿ ನೀಡಿ ಔಷಧಿ ಕಿಟ್ಗಳನ್ನು ನೀಡುತ್ತಿದ್ದಾರೆ.
ಜಿಲ್ಲೆಯ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ಇನ್ನೂ ಸುಮಾರು 1000 ಬೆಡ್ಗಳು ಖಾಲಿ ಇವೆ. ಆದರಿಂದ ಜಿಲ್ಲೆಯ ಎಲ್ಲ ತಹಸೀಲ್ದಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಸೋಂಕಿತರ ಮನವೋಲಿಸಿ ಕೋವಿಡ್ ಆರೈಕೆ ಕೇಂದ್ರಕ್ಕೆ ಅವರನ್ನು ಸ್ಥಾಳಾಂತರಿಸಲಾಗುತ್ತಿದೆ.
ಅಗತ್ಯವಿದ್ದಲ್ಲಿ ಗ್ರಾಮಮಟ್ಟದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲು ಈಗಾಗಲೇ ಅನುಮತಿ ನೀಡಲಾಗಿದೆ.
ಸೋಂಕು ಹೆಚ್ಚು ಕಂಡು ಬರುವ ಊರುಗಳಲ್ಲಿಯೇ ಕಾಳಜಿ ಕೇಂದ್ರಗಳನ್ನು ತೆರೆಯಲು ಯೋಚಿಸಲಾಗಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಮಕ್ಕಳಲ್ಲಿಯೂ ಸಹ ಸೋಂಕು ಕಂಡು ಬಂದಿದೆ. ಯಾವುದೇ ತುರ್ತು ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ.
ಅವರಿಗೆ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ ವತಿಯಿಂದ ಒಳ್ಳೆಯ ಆರೋಗ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಯಾವುದೇ ರೀತಿಯ ಪ್ರಾಣಹಾನಿ ಉಂಟಾಗಿಲ್ಲ.
ಈಗಾಗಲೇ ಹುಬ್ಬಳ್ಳಿ-ಧಾರವಾಡ ಎಲ್ಲ ನುರಿತ ಮಕ್ಕಳ ವೈದ್ಯರ ಜೊತೆ ವಿಚಾರ ಸಂರ್ಕೀಣ ನಡೆಸಲಾಗಿದ್ದು, ಸೋಂಕು ಎದುರಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ.
ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್: ಕೋವಿಡ್ ಸೋಂಕಿನ ಮೂರನೇಯ ಅಲೆ ಎದುರಿಸಲು ನಮ್ಮ ಜಿಲ್ಲೆಯ ಜನಸಂಖ್ಯೆಯ ಅನುಗುಣವಾಗಿ ಎಷ್ಟು ಬೆಡ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಹಾಗೂ ಎಲ್ಲ ಪ್ರಮುಖ ವೈದ್ಯರ ಸಮ್ಮುಖದಲ್ಲಿ ವಿಚಾರ ಸಂಕೀರ್ಣವನ್ನು ನಡೆಸಲಾಗಿದೆ.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರು ವಿವಿಧ ಕೈಗಾರಿಕೆ ಹಾಗೂ ಸಂಸ್ಥೆಗಳ ಸಿಎಸ್ಆರ್ ಯೋಜನೆಯಡಿ ಸುಮಾರು 2.5 ಕೋಟಿ ಈಗಾಗಲೇ ಮಕ್ಕಳಿಗೆ ಬೇಕಾಗುವ ಐಸಿಯು, ವೆಂಟಿಲೇಟರ್ಗಳನ್ನು ಕಿಮ್ಸ್ ಆಸ್ಪತ್ರೆಗೆ ನೀಡಿದ್ದಾರೆ.
ಮಕ್ಕಳಿಗೆ ಎಮ್ಸಿಎಚ್ ಆಸ್ಪತ್ರೆಯಲ್ಲಿ 250 ಆಕ್ಸಿಜನ್ ಬೆಡ್ಗಳು ಸಿದ್ಧವಾಗಿದ್ದು. ಸಂಭಾವ್ಯ 3ನೇ ಅಲೆಯನ್ನು ಎದುರಿಸಲು ಇನ್ನೂ 400 ಆಕ್ಸಿಜನ್ ಬೆಡ್ಗಳನ್ನು ಸಿದ್ಧಮಾಡಿಕೊಳ್ಳಲಾಗುತ್ತಿದೆ.
ಆಸ್ಪತ್ರೆಗಳಿಗೆ ಅಗತ್ಯವಿರುವ ಅರೇವೈದ್ಯಕೀಯ ಸಿಬ್ಬಂದಿಗಳನ್ನು ತಾತ್ಕಾಲಿಕ ಸೇವೆಗಾಗಿ ತರಬೇತಿ ನೀಡಿ, ಸಿದ್ಧಗೊಳ್ಳಿಸಲು ಯೋಜನೆ ರೂಪಿಸಲಾಗಿದೆ.
3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡುವ ಸಂಭವಿರುತ್ತದೆ ಆದರಿಂದ ಪಾಲಕರು ಹೆಚ್ಚು ಕಾಳಜಿಯಿಂದ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಬೇಕು.
ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳು ಬಂದ ತಕ್ಷಣ ಎಲ್ಲ ಮಕ್ಕಳ ಪೋಷಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ಫೋರ್ಸ್ ಕ್ರೀಯಾಶೀಲ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ.ಬಿ. ಅವರ ಮಾರ್ಗದರ್ಶನದಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್ಫೋರ್ಸ್ ರಚನೆ ಮಾಡಿದ್ದು. ಯಾವ ಹಳ್ಳಿಗೆ ಸೋಂಕು ಬಂದಿಲ್ಲ
ಅಂತಹ ಹಳ್ಳಿಗಳಿಗೆ ಸೋಂಕು ಬರದ ಹಾಗೆ ನೋಡಿಕೋಳುವುದು ಮತ್ತು ಸೋಂಕು ಬಂದಿರುವ ಹಳ್ಳಿಗಳಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಹಾಗೂ ಸೋಂಕು ನಿಯಂತ್ರಿಸಲು ಜಾಗೃತಿ ಮೂಡಿಸುವುದು ಟಾಸ್ಕ್ಫೋರ್ಸ್ ಸಮಿತಿಯ ಕಾರ್ಯವಾಗಿದೆ.
ಗ್ರಾಮ ಪಂಚಾಯತ ಮಟ್ಟದಲ್ಲಿಯೇ ಆರೈಕೆ ಕೇಂದ್ರ ಸ್ಧಾಪಿಸಲು ಗುರುತಿಸಲಾಗಿದ್ದು, ಈಗಾಗಲೇ ಕೆಲವುಕಡೆ ಆಂಭಿಸಲಾಗಿದೆ.
ಎಲ್ಲ ಹಾಸ್ಟೆಲ್, ಶಾಲೆ ವಶಕ್ಕೆ ಪಡೆದು ಕ್ವಾರನ್ಟೈಂಟ್ ಸೆಂಟರ್ ಹಾಗೂ ಐಸೋಲೇಷನ್ ಸೆಂಟರ್ ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಉಚಿತ ಊಟ, ಔಷಧಿಗಳನ್ನು ಗ್ರಾಮ ಪಂಚಾಯತಿಯಿಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನೀಡಲಾಗುತ್ತದೆ. ಇದರ ವೆಚ್ಚವನ್ನು ಎಸ್ಡಿಆರ್ಎಫ್ ನಿಧಿಯಿಂದ ಭರಿಸಲಾಗುವುದು.
ಎಲ್ಲ ಕಾಳಜಿ ಕೇಂದ್ರಗಳಲ್ಲಿ ದಿನಪತ್ರಿಕೆ, ಚೆಸ್, ಕೆರಂ ಮುಂತಾದ ಕ್ರೀಡಾ ಸಾಮಗ್ರಿ ಹಾಗೂ ಪುಸ್ತಕಗಳನ್ನು ಇಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.