ಧಾರವಾಡ prajakiran.com : ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಪ್ರತಿಭಟನೆ ಅಂಗವಾಗಿ ನಗರದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ನರೇಗಲ್ಲ ಪೆಟ್ರೋಲ್ ಬಂಕ್ ಮುಂದೆ ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೀರಲಕೇರಿ, ಕಳೆದ 12 ತಿಂಗಳಲ್ಲಿ ಸತತ 52 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಏರಿಸಿದ್ದು, ಪೆಟ್ರೋಲ್ ಮೇಕೆ 65 ರೂ.ಮತ್ತು ಡಿಸೇಲ್ ಮೇಲೆ 46 ರೂ. ತೆರಿಗೆ ಹಾಕಿರುವುದು ದಾಖಲೆಯ ದರೋಡೆಯಾಗಿದೆ.
ನೆರೆಯ ಶ್ರೀಲಂಕಾ, ಭೂತಾನ್, ಬಾಂಗ್ಲಾ, ಪಾಕಿಸ್ತಾನ ಹೋಲಿಸಿದರೆ 60 ಪ್ರತಿಶತ ಹೆಚ್ಚು ಭಾರತದಲ್ಲಿ ಬೆಲೆ ಹೆಚ್ಚಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ಮತ್ತು ಆಡಳಿತದಲ್ಲಿನ ವೈಫಲ್ಯದಿಂದ ವಿದ್ಯುತ್,ಪೆಟ್ರೊಲ್, ಡೀಸೆಲ್, ಗ್ಯಾಸ್ ಸಿಲಿಂಡರ್ , ಬೀಜ, ರಸಗೊಬ್ಬರಗಳ ದರ ಏರಿಕೆ ಕಂಡಿವೆ.
ಇದರ ಜೊತೆಗೆ ಸರ್ವಜನಿಕರಿಗೆ ಸಮರ್ಪಕವಾಗಿ ವಿತರಿಸಲಾಗುತ್ತಿಲ್ಲ.
ಜೊತೆಗೆ ಆಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿವೆ.
ಇನ್ನೊಂದೆಡೆ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಎರಡೂ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ.
ಕರೋನಾ ಭೀಕರ ಕಾಯಿಲೆಯ ಸಂದರ್ಭದಲ್ಲಿ ರೈತರು,ರೈತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ಬದಿಯ ಸಣ್ಣ ಅತಿಸಣ್ಣ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ.
ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆ, ಭೂಮಿ ಕಳೆದುಕೊಂಡಿರುವ ಕುಟುಂಬಗಳು ಸೇರಿದಂತೆ ಬಹುತೇಕರು ತಮ್ಮ ನಿತ್ಯ ಬದುಕು ಕಟ್ಟಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.
ಆಳುತ್ತಿರುವ ಸರಕಾರಗಳು ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸದೇ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿರುವದು ಖಂಡನೀಯ.
ಪ್ರಜಾ ಪರಿಪಾಲನೆಗೆ ಸರಕಾರಗಳು ಮುಂದಾಗದಿದ್ದರೆ ತಮ್ಮ ಮೇಲೆ ಅಪಾರ ಭರವಸೆ ಇಟ್ಟು ಚುನಾಯಿಸಿದ ಮತದಾರರಿಗೆ ಮೋಸವಾಗಿದೆ.
ಸದಾ ಸುಳ್ಳಿನ ಮೂಲಕ ಆಡಳಿತ ನಡೆಸುವುದು ರಾಜ್ಯದ ಜನತೆಗೆ ಗೊತ್ತಾಗಿದೆ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯದ ಜನತೆಯ ಹಿತಕಾಯಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ನೀರಲಕೇರಿ ಆರೋಪಿಸಿದರು.
ಯುವ ಮುಖಂಡ ಇಮ್ರಾನ ಕಳ್ಳಿಮನಿ, ರಾಜು ವಾರಂಗ,ಲೋಕೇಶ ಮ್ಯಾಗೇರಿ, ರವಿ ಗೌಳೆ ಜೊತೆಗಿದ್ದರು.
ಇದೇ ವೇಳೆ ಧಾರವಾಡದ ಹಲವಡೆ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆದರು.