ಧಾರವಾಡ ಪ್ರಜಾಕಿರಣ.ಕಾಮ್ : ಜಿಪಂ ಸದಸ್ಯ ಯೋಗೀಶಗೌಡರ ಸಾವಿನ ಪರ ಅಂದಿನಿಂದ ಇಂದಿನವರೆಗೆ ಯಾರೊಬ್ಬರು ಧ್ವನಿ ಎತ್ತಲಿಲ್ಲ. ಅವರು ಕೂಡ ಪ್ರಬಲ ಲಿಂಗಾಯತ ಸಮಾಜದ ಪಂಚಮಸಾಲಿ ಸಮುದಾಯದವರು ಎಂಬುದು ಕೂಡಲಸಂಗಮ ಸ್ವಾಮೀಜಿ ಸೇರಿದಂತೆ ನಾಡಿನ ಮಠಾಧೀಶರು ಮರೆಯಬಾರದು ಎಂದು ಬಿಜೆಪಿ ಮುಖಂಡ ಗುರುನಾಥ ಗೌಡರು ಹೇಳಿದರು.
ಅವರು ಬುಧವಾರ ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಹಿಂದೆ ಯೋಗೀಶಗೌಡರ ಜೊತೆಗೆ ಇದೇ ಸ್ವಾಮೀಜಿ ಹಲವಾರು ವರ್ಷಗಳ ಕಾಲ ಓಡಾಡಿದವರು.
ಅವರಿದ್ದಾಗ ಅನೇಕ ಬಾರಿ ಮನೆಗೆ ಬಂದು ಹೋದ ಸ್ವಾಮೀಜಿಯವರು, ಕನಿಷ್ಠ ಸೌಜನ್ಯಕ್ಕಾದರೂ ಅವರ ಸಾವಿಗೆ ನ್ಯಾಯ ಸಿಗಲಿ ಅಂತ ಹೇಳಲಿಲ್ಲ.
ಒಂದೇ ಒಂದು ಬಾರಿ ನಮ್ಮ ಅಳಲು ಕೇಳುವ ಮನಸ್ಸು ಮಾಡಲಿಲ್ಲ ಎಂದು ಭಾವುಕರಾದರು.
ಧಾರವಾಡ ಜಿಲ್ಲೆಯ ಪ್ರತಿಷ್ಠಿತ ಮುರುಘಾಮಠ ಸೇರಿದಂತೆ ಅನೇಕ ಮಠ ಮಾನ್ಯರ ಮೇಲೆ ನಮಗೆ ಅಪಾರ ಗೌರವ, ಭಕ್ತಿಭಾವವಿದೆ.
ಆದರೆ ಅವರು ಈ ಪ್ರಕರಣದಲ್ಲಿ ನಡೆದುಕೊಳ್ಳುವ ರೀತಿ ಸರಿಯಿಲ್ಲ ಎಂಬ ನೋವು ನಮಗೆ ಕಾಡುತ್ತಿದೆ. ತಮ್ಮ ಸ್ವಾರ್ಥ ರಾಜಕೀಯಕ್ಕೆ ಮಠ, ಮಾನ್ಯಗಳ, ನಟರ ಹಾಗೂ ಹಿರಿಯ ರಾಜಕಾರಣಿಗಳ ಬಳಕೆ ಯಾರಿಗೂ ಶೋಭೆ ಕೊಡಲ್ಲ ಎಂಬುದು ಮಾಜಿ ಸಚಿವ ವಿನಯ ಕುಲಕರ್ಣಿ ಮರೆಯಬಾರದು ಎಂದರು.
ನನಗೆ ನನ್ನ ಪ್ರೀತಿಯ ಜಾನುವಾರು ನೋಡಲು ಆಗುತ್ತಿಲ್ಲ ಎಂದು ಭಾವುಕರಾಗುವ ಮಾಜಿ ಸಚಿವರು ನಮ್ಮ ಕುಟುಂಬದ ಒಂದು ಕುಡಿಯನ್ನೇ ಕಳೆದುಕೊಂಡ ಬಗ್ಗೆ ಎಂದಿಗೂ ನೋವು ಅರಿಯಲಿಲ್ಲ.
ಬದಲಿಗೆ ಅವರ ಪತ್ನಿಗೆ ಇಲ್ಲದ ಒತ್ತಡ ಹೇರಿ, ಅವರನ್ನು ಕೂಡ ಅವರ ಕಡೆ ಸೆಳೆದರು. ಆದರೂ ನಾವು ಎದೆಗುಂದದೆ ನಮ್ಮ ಹಿರಿಯ ಜೀವ ನಮ್ಮ ತಾಯಿಯಾದ ತುಂಗಮ್ಮ ನಿಂಗನಗೌಡರ ಅವರ ಸಲುವಾಗಿ ನಾವು ಅನೇಕ ಸಂಕಷ್ಟ, ಸವಾಲು ಎದುರಿಸಿ, ಸುಳ್ಳು ಮೊಕದ್ದಮೆ ದಾಖಲಾದರೂ ಹೋರಾಟ ನಡೆಸುವುದು ಕೈ ಬಿಡಲಿಲ್ಲ.
ನಮ್ಮ ಪ್ರಾಣದ ಹಂಗು ತೊರೆದು ತಮ್ಮನ ಸಾವಿಗೆ ನ್ಯಾಯ ಕೊಡಿರಿ ಅಂತ ಹೋರಾಟ ನಡೆಸುವ ಪರಿಸ್ಥಿತಿ ಹಿಂದೆನೂ ಇತ್ತು. ಇವತ್ತು ಇದೆ ಎಂಬ ಬೇಸರ ನಮಗೆ ಕಾಡುತ್ತಿದೆ ಎಂದು ಗುರುನಾಥ ಗೌಡ ಗೌಡರ ಕಳವಳ ವ್ಯಕ್ತಪಡಿಸಿದ್ದಾರೆ.