ನಾಡಿನ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಇನ್ನು ನೆನಪು ಮಾತ್ರ…!
ಧಾರವಾಡ ಪ್ರಜಾಕಿರಣ.ಕಾಮ್ : ನಾಡಿನ ಹಿರಿಯ ಸಾಹಿತಿಗಳಾಗಿದ್ದ ಡಾ. ಗುರುಲಿಂಗ ಕಾಪಸೆ ಅವರು ತಮ್ಮ 96 ನೇ ವಯಸ್ಸಿನಲ್ಲಿ ಬುಧವಾರ ಬೆಳಗ್ಗೆ ನಿಧನ ಹೊಂದಿದರು.
ಅವರ ಅಂತಿಮ ದರ್ಶನವನ್ನು ಧಾರವಾಡದ ಸಪ್ತಾಪೂರ ಬಳಿಯ ದುರ್ಗಾ ಕಾಲೋನಿ ಯಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ನಂತರ ಅವರ ದೇಹವನ್ನು ಬೈಲಹೊಂಗಲನ ಡಾ. ಮಹಾಂತೇಶ ರಾಮಣ್ಣವರ ಆಸ್ಪತ್ರೆಗೆ ನೀಡಲಾಗುವುದು.
ಗುರುಲಿಂಗ ಕಾಪಸೆ ಗುರುಗಳು
ಮಧುರಚೆನ್ನರು ಮತ್ತು ಅಂಬಿಕಾತನಯದತ್ತರನ್ನು ಎಂಟು ದಶಕಗಳಿಂದ ಹತ್ತಿರದಿಂದ ನೋಡಿ, ಅವರಿಬ್ಬನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಂಡಿದ್ದರು ಎಂದು ಹಿರಿಯ ಸಾಹಿತಿ ಹ.ವೆಂ. ಕಾಖಂಡಕಿ ಅವರು ತಮ್ಮ ಕಂಬನಿ ಮಿಡಿದಿದ್ದಾರೆ.
ಡಾ.ಗುರುಲಿಂಗ ಕಾಪಸೆಯವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ನಗು, ಆತ್ಮೀಯ ಮಾತುಗಳಿಂದ ವಿದ್ಯಾರ್ಥಿಗಳಲ್ಲಿನ ಕೀಳರಿಮೆ, ಆತಂಕಗಳನ್ನು ದೂರ ಮಾಡುತ್ತಿದ್ದರು.
ತಮ್ಮ ಶಿಷ್ಯರು ಬರೆದ ಒಳ್ಳೆಯ ಕಥೆ, ಕವನಗಳನ್ನು ಕ್ಲಾಸ್ ರೂಮಿನಲ್ಲಿಯೇ ಓದಿ ಹೇಳುತ್ತಿದ್ದರು ಎಂದು ಸಿದ್ದನಗೌಡ ಪಾಟೀಲರು ಕಂಬನಿ ಮಿಡಿದಿದ್ದಾರೆ.
96 ವರ್ಷದ ತುಂಬು ಜೀವನ ನಡೆಸಿದ ಕಾಪಸೆ ಗುರುಗಳು ತಮ್ಮ ನಡೆ, ನುಡಿ, ಸರಳ ಆದರ್ಶಗಳಿಂದ ಸದಾಕಾಲ ಇತರರಿಗೆ ಮಾದರಿಯಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.