ಹಳಿಯಾಳ prajakiran.com : ಗಂಗಾವತಿ ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ನವೆಂಬರ್ 2ರಂದು ಮುಹೂರ್ತ ನಿಗದಿಯಾಗಿದೆ.
ಹೀಗಾಗಿ ಅಧ್ಯಕ್ಷ ಗಾದೆಯ ಮೇಲೆ ಕಣ್ಣು ಹಾಕಿರುವ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಿಡ್ನಾಪ್ ಮಾಡಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದ್ದಾರೆ.
ನವಂಬರ್ 2 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ನಗರಸಭಾ ಸದಸ್ಯ ಮನೋಹರ ಹಿರೇಮಠ ಅವರನ್ನು ಸಿನಿಮೀಯ ಮಾದರಿಯಲ್ಲಿ ಬಿಜೆಪಿಯ ಅಜಯ ಬಿಚ್ಚಾಲಿ, ಪರಶುರಾಮ ಮಡ್ಡೇರ, ನವೀನ್ ಮಾಲಿಪಾಟೀಲ, ರಾಚಪ್ಪ ಸಿದ್ದಾಪುರ, ರಾಘವೇಂದ್ರ ಶೆಟ್ಟಿಯವರು ಅಪಹರಿಸಿರುವ ಕುರಿತು ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರು ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಅವರಿಗೆ ಪೊಲೀಸರು ಸೂಕ್ತ ರಕ್ಷಣೆ ಕೊಟ್ಟು ಕಾಂಗ್ರೆಸ್ ನಾಯಕರು ಹಾಗೂ ಅವರ ಸಂಬಂಧಿಕರು ಬರುವರೆಗೆ ಅವರನ್ನು ಕಾಪಾಡಬೇಕು.
ಈ ಬಗ್ಗೆ ಈಗಾಗಲೇ ಉತ್ತರಕನ್ನಡ ಎಸ್ಪಿ ಶಿವ್ ಪ್ರಕಾಶ ದೇವರಾಜ್ ಅವರ ಜೊತೆಗೆ ಮಾತನಾಡಿದ್ದೇನೆ.
ಅವರು ಸೂಕ್ತ ರಕ್ಷಣೆ ಕೊಡುವ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಪ್ರಜಾಕಿರಣ.ಕಾಮ್ ಗೆ ವಿವರಿಸಿದ್ದಾರೆ.
ಮನೋಹರ ಹಿರೇಮಠ ಸದ್ಯ ಹಳಿಯಾಳ ಪೊಲೀಸ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ್ ಬಳಿಯಿದ್ದು, ಈ ಬಗ್ಗೆ ಎಸ್ಪಿಯವರ ಗಮನ ಸೆಳೆಯಲಾಗಿದೆ.
ಅವರು ರಾಜ್ಯದ ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿದು ಅವರನ್ನು ಮತ್ತೆ ಬಿಟ್ಟರೆ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎಂದು ನೀರಲಕೇರಿ ಎಚ್ಚರಿಸಿದ್ದಾರೆ.