ಬೆಂಗಳೂರು prajakiran.com : ಕರೋನಾ ಆತಂಕದ ಮಧ್ಯೆಯೂ ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ರಾಜ್ಯ ಸರ್ಕಾರ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಸರಳವಾಗಿ ಗಣೇಶ ಹಬ್ಬ ಆಚರಿಸುವಂತೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈ ಗೊಳ್ಳಲಾಗಿದೆ.
ಬಳಿಕ ಈ ಕುರಿತು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಈ ಬಾರಿ 5 ದಿನಗಳ ಕಾಲ ಸರಳ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದರು.
ಆದರೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳನ್ನು ಪಾಲಿಸಬೇಕು ಎಂದರು.
ಹೊಸ ಮಾರ್ಗಸೂಚಿ ವಿವರ :
* ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ
* ಗಣೇಶೋತ್ಸವ ಸಂಘಟಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು
* ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ
* ಸರ್ಕಾರಿ ಹಾಗೂ ಖಾಲಿ ಜಾಗಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು
* ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ವ್ಯಾಕ್ಸಿನೇಷನ್ ಅಭಿಯಾನ
* ನಗರ ಪ್ರದೇಶಗಳಲ್ಲಿ ವಾರ್ಡ್ ಗೆ 1ರಂತೆ ಮೂರ್ತಿ ಪ್ರತಿಷ್ಠಾಪಿಸಬಹುದು
* ಗ್ರಾಮೀಣ ಅಥವಾ ಹಳ್ಳಿಗಳಲ್ಲಿ ಸ್ಥಳೀಯಾಡಳಿತದಿಂದ ಷರತ್ತುಗಳ ನಿರ್ಧಾರ
* 50X50 ವಿಸ್ತೀರ್ಣದ ಪೆಂಡಾಲ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
* ಯಾವುದೇ ಮನರಂಜನಾ ಕಾರ್ಯಕ್ರಮ, ಡಿಜೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
* ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ, ವಾದ್ಯಗಳಿಗೆ ನಿರ್ಬಂಧ
* ನಿಗದಿತ ಸದಸ್ಯರಿಂದ ಮಾತ್ರ ನಿಗದಿತ ಸ್ಥಳಗಳಲ್ಲಿ ವಿಸರ್ಜನೆ
* ಹಳ್ಳಿಗಳಲ್ಲಿ ಕೆರೆಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ
* ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಗಡಿ ಜಿಲ್ಲೆಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ
* ಶಾಲಾ-ಕಾಲೇಜುಗಳಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಹೇಳಲಾಗಿದೆ.