ಮಂಜುನಾಥ ಸಿಂಗ್ ರಾಠೋಢ
ಗದಗ prajakiran.com : ಮಲಪ್ರಭಾ ನದಿ ಪಾತ್ರದ ಪ್ರವಾಹಕ್ಕೊಳಗಾದ ನರಗುಂದ ತಾಲೂಕಿನ ಲಕಮಾಪುರ ಗ್ರಾಮದ 50 ಕುಟುಂಬಗಳ ಇನ್ನೂರ ಜನರನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಮನವೊಲಿಸಿ ಬೆಳ್ಳೆರಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು.
ಮಲಪ್ರಭಾ ಪ್ರವಾಹಕ್ಕೊಳಗಾದ ಲಕಮಾಪುರ ಗ್ರಾಮದ ಜನರು ಕಾಳಜಿ ಕೇಂದ್ರಕ್ಕೆ ತೆರಳದೆ ರಸ್ತೆಯಲ್ಲಿಯೇ ವಾಸವಾಗಿದ್ದರು.
ತದನಂತರ ಪ್ರವಾಹಕ್ಕೊಳಗಾದ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ನೀರಿನ ಮಟ್ಟ ಹೆಚ್ಚಾದಲ್ಲಿ ಗ್ರಾಮಸ್ಥರನ್ನು ಕೊಣ್ಣೂರಿನ ಪ್ರೌಢ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಾಳಜಿ ಕೇಂದ್ರಗಳಲ್ಲಿರುವ ಪ್ರವಾಹ ಸಂತ್ರಸ್ಥರಿಗೆ ಕೋವಿಡ್-19 ಹಿನ್ನಲೆಯಲ್ಲಿ ಅಗತ್ಯದ ಮಾಸ್ಕ, ಸ್ಯಾನಿಟೈಸರ್ ಹಾಗೂ ಅವಶ್ಯಕ ಔಷಧಿಗಳ ವ್ಯವಸ್ಥೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಿ ಕಾಳಜಿ ಕೇಂದ್ರಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸಂತ್ರಸ್ಥರಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಶಿಥಿಲಾವಸ್ಥೆಯಲ್ಲಿರುವಂತಹ ಮನೆಗಳನ್ನು ಗುರುತಿಸಿ ಅಲ್ಲಿ ವಾಸಿಸುತ್ತಿರವ ಜನರನ್ನು ಮನವೊಲಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕ್ರಮವಹಿಸಬೇಕು.
ಜಿಲ್ಲೆಯ್ಯಾದ್ಯಂತ ಮಳೆ ಪ್ರಮಾಣ ಅಧಿಕವಾಗಿರುವದರಿಂದ ಆಣೆಕಟ್ಟುಗಳಿಂದ ಹೆಚ್ಚುವರಿ ನೀರು ಹರಿಸುತ್ತಿರುವದರಿಂದ ಸ್ಥಳೀಯ ಅಧಿಕಾರಿಗಳು ಅತೀ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು.
ಜನ, ಜಾನುವಾರುಗಳ ಆಸ್ತಿ ರಕ್ಷಣೆಗೆ ಎಲ್ಲ ಅಗತ್ಯದ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ದರಾಗಿರುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಜೂಗೌಡ ಕೆಂಚನಗೌಡ್ರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಯತೀಶ ಎನ್., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ ಮಹೇಂದ್ರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಉಪಸ್ಥಿತರಿದ್ದರು.