*ಧಾರವಾಡದಲ್ಲಿ ಗಾಳಿಯಲ್ಲಿ ಗುಂಡು ಪ್ರಕರಣ*
*ದೂರು- ಪ್ರತಿದೂರು ದಾಖಲಿಸಿಕೊಂಡ ವಿದ್ಯಾಗಿರಿ ಪೊಲೀಸರು*
ಧಾರವಾಡ ಪ್ರಜಾಕಿರಣ.ಕಾಮ್ : ವ್ಯಕ್ತಿಯೊಬ್ಬರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಪ್ರಕರಣ ಧಾರವಾಡದ ಅತ್ತಿಕೊಳ್ಳ ಬಡಾವಣೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ನಿವೇಶನದ ಮಾಲೀಕ ಸುಶಾಂತ ಅಗರವಾಲ್ ಎಂಬುವವರೆ ಗುಂಡು ಹಾರಿಸಿದ್ದಾರೆ ಎಂದು
ಪವನ್ ಕುಲಕರ್ಣಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಮುಂಬೈನಲ್ಲಿ ನೆಲೆಸಿರುವ ಸೈಟ್ ಮಾಲೀಕ ಸುಶಾಂತ್ ಅವರು ಕೆಲ ಸ್ಥಳೀಯರಿಂದ ನಿವೇಶನ ಅತಿಕ್ರಮಣ ವಿಚಾರ ತಿಳಿದುಕೊಂಡು ನಿವೇಶನದ ಸ್ಥಳ ಪರಿಶೀಲನೆಗೆ ಆಗಮಿಸಿದ್ದಾಗ ಕೆಲವರು ಅಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅಲ್ಲಿಂದ ತೆರಳುವಂತೆ ಸೂಚಿಸಿದರೂ ಅವರು ಕ್ಯಾರೆ ಎನ್ನದೆ, ನನ್ನ ಕಡೆ ನುಗ್ಗಿ ಬಂದಾಗ ಗುಂಡು ಹಾರಿಸಿರುವುದಾಗಿ ಸುಶಾಂತ್ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ
ವಿಷಯ ತಿಳಿದು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ, ನಿವೇಶನದ ಮಾಲೀಕ ಸುಶಾಂತ್ ನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪವನ ಕುಲಕರ್ಣಿ ಅವರು ಸುಶಾಂತ್ ವಿರುದ್ಧ ದೂರು ದಾಖಲಿಸಿದರೆ, ಸುಶಾಂತ್ ನಿವೇಶನ ಅತಿಕ್ರಮಣ, ಬೆದರಿಕೆ ಹಾಕಿದ ಕುರಿತು ಪ್ರತಿದೂರು ದಾಖಲಿಸಿದ್ದಾರೆ.
ಈಗಾಗಲೇ ಸುಶಾಂತ್ ತಮ್ಮ ಜಮೀನಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿದ್ದರೂ ಅತಿಕ್ರಮಣ ಮಾಡಿದಲ್ಲದೆ, ಅವಾಜ್ ಹಾಕಿದ್ದರಿಂದ ಆತ್ಮರಕ್ಷಣೆಗೆ ಅಂತಾ ಸುಶಾಂತ್ ತಮ್ಮ ಪರವಾನಿಗೆ ಹೊಂದಿದ ರಿವಾಲ್ವರ್ ನಿಂದ ಗುಂಡು ಹಾರಿಸಿರುವುದಾಗಿ ಸುಶಾಂತ್ ಪ್ರಜಾಕಿರಣ.ಕಾಮ್ ಗೆ ಹೇಳಿದರು.
ಈ ಕುರಿತು ಪ್ರಜಾಕಿರಣ. ಕಾಮ್ ಜೊತೆಗೆ ಮಾತನಾಡಿದ ಪವನ್ ಕುಲಕರ್ಣಿ, ನಾವು ಯಾವುದೇ ರೀತಿಯ ಅತಿಕ್ರಮ ಮಾಡಿಲ್ಲ. ಅವರ ನಿವೇಶನ ನಮ್ಮ ನಿವೇಶನ ಅಕ್ಕಪಕ್ಕಯಿದೆ. ಅವರು ತಮ್ಮ ಜೊತೆಗೆ ಮಾತನಾಡದೆ, ಯಾರದೋ ಮಾತಿಗೆ ಒಳಗಾಗಿ ಏಕಾ ಎಕಿ ಗುಂಡಿನ ದಾಳಿ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಇಬ್ಬರ ವಿಚಾರಣೆಯನ್ನೂ ನಡೆಸಿರುವ ವಿದ್ಯಾಗಿರಿ ಪೊಲೀಸರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.