ಧಾರವಾಡ prajakiran.com : ಪ್ರಸಕ್ತ ಸನ್ನಿವೇಶದಲ್ಲಿ ವೀರಶೈವ-ಲಿಂಗಾಯತ ಸಮಾಜದವರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿನ ಚನ್ನಬಸವೇಶ್ವರ ನಗರದಲ್ಲಿನ ಲಿಂಗಾಯತ ಸಭಾವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ’ಪಸ್ತುತ ಸನ್ನಿವೇಶದಲ್ಲಿ ಸಮಾಜದ ಸಂಘಟನೆ’ ಎಂಬ ವಿಷಯ ಕುರಿತ ಮಠಾಧೀಶರು ಮತ್ತು ಸಮಾಜದ ಚಿಂತಕರೊಂದಿಗಿನ ಸಂವಾದ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಹಲವಾರು ಶತಮಾನಗಳಿಂದ ಸಮಾಜ ತುಳಿತಕ್ಕೊಳಗಾಗಿದೆ. ನಿರುದ್ಯೋಗ, ಅನಕ್ಷರತೆ, ಇನ್ನಿತರ ಸಮಸ್ಯೆಗಳಿಂದ ಯುವ ಸಮುದಾಯ ನಿರಶನಗೊಂಡಿದೆ. ಇದು ಅನ್ಯಧರ್ಮಗಳತ್ತ ಆಕರ್ಷಿತರಾಗಲು ಕಾರಣವಾಗಿದೆ.
ರಾಜಕೀಯ ಸ್ವಾರ್ಥದಿಂದ ಪರಸ್ಪರ ಕಿತ್ತಾಡುತ್ತಿರುವದು ಸಮಾಜದ ಸಂಘಟನೆಗೆ ತೊಡಕಾಗಿದೆ ಎಂದರು.
ಒಳಪಂಗಡಗಳ ಮೇಲಿನ ಅಭಿಮಾನದಿಂದ
ಅಖಂಡ ಸಮಾಜ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿನ ಒಳಪಂಗಡಗಳಲ್ಲಿ ಸಂಬಂಧ ಬೆಳೆಸಲು ಆಸಕ್ತಿ ತೋರಿಸಬೇಕು.ಇದರಿಂದ ಸಮಾಜದ ಶಕ್ತಿ ವೃದ್ಧಿಯಾಗಲಿದೆ.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಕಡೆಗಣಿಸಿ ಎಲ್ಲ ರಂಗಗಳಲ್ಲಿಯೂ ಸಮಾಜದವರು ಬೆಳೆಯಬೇಕು. ಸಮಾಜದವರನ್ನು
ಬೆಳೆಸುವ ಪ್ರವೃತ್ತಿ ಕೂಡ ಬರಬೇಕು ಎಂದ ಶ್ರೀಗಳು, ತಾಳ್ಮೆ, ಸಂಘಟನೆ ಜೊತೆಗೆ ಬುದ್ಧಿಮಟ್ಟ ಹೆಚ್ಚಿಸಿಕೊಂಡರೆ ಮಾತ್ರ ಬಲಿಷ್ಠ ಸಮಾಜ ಕಟ್ಟಲು ಸಾಧ್ಯ ಎಂದರು.
ಸಂಘಟನೆಯಲ್ಲಿ ಮಠಾಧೀಶರು ತಮ್ಮ ಜವಾಬ್ದಾರಿ ನಿರ್ವಹಿಸಲು ಸಿದ್ಧರಿದ್ದೇವೆ. ಸಮಾಜದ ಜನರು ಮತ್ತು ಮಠಾಧೀಶರು ಕೂಡಿ ಮುಂದೆ ಸಾಗದೇ ಬೇರೆ ಮಾರ್ಗವಿಲ್ಲ ಎಂದರು.