ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು 24ನೇ ದಿನವೂ ಮುಂದುವರಿದ ಸರದಿ ಉಪವಾಸ ಸತ್ಯಾಗ್ರಹ
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರಾಜ್ಯಪಾಲರಿಗೆ ದೂರು
ಅರೆ ಬೆತ್ತಲೆ ಪ್ರತಿಭಟನೆ ಮೂಲಕ ಸರಕಾರಕ್ಕೆ ಚಾಟಿ ಬೀಸಿದ 358 ನೀರು ಸರಬರಾಜು ನೌಕರರು ….!
ಧಾರವಾಡ ಪ್ರಜಾಕಿರಣ.ಕಾಮ್ : 358 ನೀರು ಸರಬರಾಜು ನೌಕರರ ಮರು ನೇಮಕ ಹಾಗೂ 4 ತಿಂಗಳ ಸಂಬಳ ಬಿಡುಗಡೆಗೆ ಆಗ್ರಹಿಸಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಕಚೇರಿ ಆವರಣದಲ್ಲಿ ಕಳೆದ 24 ದಿನದಿಂದ ವಿಭಿನ್ನ, ವಿಶಿಷ್ಟ ಹಾಗೂ ಅರ್ಥಪೂರ್ಣ ಹೋರಾಟ ನಡೆಸಿದರೂ ರಾಜ್ಯದ ಘನ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಬುಧವಾರ ನೂರಾರು ನೌಕರರು ಅರೆ ಬೆತ್ತಲೆ ಚಳುವಳಿ ನಡೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ನಮ್ಮ ನೂರಾರು ನೌಕರರ ಬದುಕು ಬೀದಿಗೆ ತಂದು ಇಂದು ಅರೆ ಬೆತ್ತಲೆ ಪ್ರತಿಭಟನೆ ಮಾಡುವ ಸ್ಥಿತಿಗೆ ತಂದ ಮಹಾನಗರ ಪಾಲಿಕೆಯಲ್ಲಿನ ಪ್ರತಿಯೊಂದು ಭ್ರಷ್ಟಾಚಾರವನ್ನು ಮುಂದಿನ ದಿನಗಳಲ್ಲಿ ಬೆತ್ತಲೆ ಮಾಡುವ
ಮೇಯರ್, ಆಯುಕ್ತರ ನಿಜವಾದ ಬಣ್ಣವನ್ನು ಬಯಲಿಗೆ ತರಲಾಗುವುದು
ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ ನಮ್ಮ 24 ದಿನಗಳ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಚಾಟಿ ಬೀಸಿದ್ದೇವೆ.
ಇದಕ್ಕೆ ಜಗ್ಗದಿದ್ದರೆ ಮುಂದೆ ಕಾನೂನು ಹೋರಾಟದ ದಾರಿ ತುಳಿಯಲಾಗುವುದು ಎಂದರು.
ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ನಿರಂತರವಾದ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾದ
ಜಿಲ್ಲಾಡಳಿತ/ಮಹಾನಗರ ಪಾಲಿಕೆ ಯಾವುದೇ ಸ್ಪಂದನೆ ನೀಡದಿರುವುದು ನೋಡಿದರೆ ಅವರು ಸಂವೇದನೆ ಹಾಗೂ ಮಾನವೀಯತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ.
ನಿಜವಾಗಿಯೂ ನಮ್ಮ ಜಿಲ್ಲೆಯ ಮಾಜಿ, ಹಾಲಿ ಹಾಗೂ ಭಾವಿ ಮುಖ್ಯಮಂತ್ರಿ ಎಂದು ಹೇಳಲು ನಾಚಿಕೆಯಾಗುತ್ತಿದೆ. ಇನ್ನೂ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರು ಎಂದು ಬಿಂಬಿಸುವ ಸಚಿವರು ಅಂತೂ ಇಷ್ಟೆಲ್ಲಾ ಹೋರಾಟ ಆದರೂ ಇವರತ್ತ ಕಣ್ಣು ತೆಗೆದು ನೋಡದಿರುವುದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕಿ ಇವರಿಗೆ ಛೀಮಾರಿ ಹಾಕಿದಾಗ
ಜಿಡ್ಡುಗಟ್ಟಿರುವ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಮತ್ತು ವಿಶೇಷವಾಗಿ
ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ ಎಂದು ಕಿಡಿಕಾರಿದರು.
ದುಷ್ಟ ರಾಜಕಾರಣಿಗಳ ಕೈ ಗೊಂಬೆಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ದುರವರ್ತನೆಯನ್ನು ಪ್ರತಿಭಟನಾಕಾರರು ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ. ಮತ್ತು ನೀರು ಸರಬರಾಜು ನಿರ್ವಹಣೆ ಮಾಡುತ್ತಿರುವ ಎಲ್&ಟಿ ಕಂಪನಿಯ ಕಾರ್ಮಿಕ ವಿರೋಧಿ ನೀತಿ ವಿರುದ್ದ ಘೋಷಣೆ ಕೂಗಿ, ಬೊಬ್ಬೆ ಹಾಕುವ ಮೂಲಕ ತಮ್ಮಆಕ್ರೋಶ ವ್ಯಕ್ತಪಡಿಸಿದರು
ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಆದ್ದರಿಂದ ರಾಜ್ಯಪಾಲರು ಈ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣೀಸಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ
ಜನ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ನೀರು ಸರಬರಾಜು ನೌಕರರ ಸಂಘದ
ಮಹಾಂತೇಶ ಗೌಡರ, ಆನಂದ ಕಾಳಮ್ಮನವರ, ಹಮ್ಮಣಿ, ಭಾಗ್ಯೋದಯ, ಬಸವರಾಜ ಮುಕ್ಕಲ, ಸರೋಜಾ ನಿಂಬಕ್ಕನವರ, ಅಯ್ಯಪ್ಪಯ್ಯ ಹಿರೇಮಠ, ಮಹೇಶ ಮೇಲಿನಮಠ
ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.