ಧಾರವಾಡ prajakiran.com : ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ನಗರದ ಕಿರಣ ಗೆಳೆಯರ ಬಳಗದಿಂದ ಆ.೧೬ ರಂದು ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಿರಣ ಹಾವಣಗಿ ತಿಳಿಸಿದ್ದಾರೆ.
ತಮ್ಮ ತಮ್ಮ ಉದ್ಯೋಗಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ, ಸಮಾಜದ ಏಳಿಗೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಧಾರವಾಡದ ಕಿರಣ ಗೆಳೆಯರ ಬಳಗ ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ಶ್ರಾವಣ ಕಡೆಯ ಸೋಮವಾರ ಧಾರವಾಡದಿಂದ ಆ.೧೬ರಂದು ಸಂಜೆ ೬.೩೦ಕ್ಕೆ ಹುಬ್ಬಳ್ಳಿ ಸಿದ್ಧಾರೂಢ ಅಜ್ಜನ ಮಠಕ್ಕೆ ಪಾದಯಾತ್ರೆ ನಡೆಸಲಿದೆ.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ನಡೆಸುತ್ತಿದ್ದ ಈ ಬಳಗ ಈ ವರ್ಷ ಕೊರೊನಾ ಮಹಾಮಾರಿಯಿಂದ ನಲುಗಿರುವ ಭಾರತ ಕೊರೊನಾ ಮುಕ್ತವಾಗಲಿ, ಆರ್ಥಿಕವಾಗಿ ಮತ್ತೆ ಪುಟಿದೇಳಲಿ ಎಂದು ಪ್ರಾರ್ಥಿಸಿ ಧಾರವಾಡದ ಎನ್ಟಿಟಿಎಫ್ ಹತ್ತಿರದ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆ ಆರಂಭಿಸಿ ಶ್ರೀ ಗುರು ಅಜ್ಜನ ಮಠದವರೆಗೆ ಸಾಗಲಿದೆ.
ಕೊರೊನಾ ಬಂದಾಗಿನಿಂದ ಸರಿಯಾಗಿ ಉದ್ಯೋಗವಿಲ್ಲದೇ ಜನ ಬಸವಳಿದಿದ್ದಾರೆ. ಈ ರೋಗದಿಂದ ದೇಶವನ್ನು ನೀನೇ ಕಾಪಾಡು ಪ್ರಭುವೇ ಎಂದು ಅಜ್ಜನ ಮೊರೆ ಹೋಗಿರುವ ಬಳಗ, ಬೇಡಿಕೆ ಈಡೇರಲೆಂದು ಪ್ರಥಮ ಪೂಜಿಪ ಸಿದ್ಧಿ ವಿನಾಯಕನಿಗೆ ಮೊದಲು ಪೂಜೆ ಸಲ್ಲಿಸಿ ಪಾದಯಾತ್ರೆ ನಡೆಸಲಿದ್ದಾರೆ.
ಪಾದಯಾತ್ರೆಯಲ್ಲಿ ಬಳಗದ ವಿನಯ ಶಿಂಧೆ, ದೀಪಕ ಪಾಟೀಲ, ಸತೀಶ ವೀರಾಪುರ, ವಿಶ್ವನಾಥ ನಡಕಟ್ಟಿ, ಸೈಯದ್ತುರಾಬುದ್ದೀನ ಎಸ್.ಮೈಸೂರ, ವಿಜಯ ಹಾವಣಗಿ, ಶರದ ಟಿಕಾರೆ, ಸುನೀಲ ಸೂರ್ಯವಂಶಿ, ಪ್ರಜ್ವಲ ಸೂರ್ಯವಂಶಿ, ಸಂದೇಶ ಸಾವಂತ, ಪ್ರಸನ್ನಕುಮಾರ ಹಿರೇಮಠ ಸೇರಿದಂತೆ ಅನೇಕ ಸದಸ್ಯರು, ಯುವಕರು, ಮಕ್ಕಳು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.
ಬಳಗದ ಘೋಷಣೆಗಳು
* ಕನಿಷ್ಠ ಎರಡು ಅಡಿ ಅಂತರ ಕಾಪಾಡಿಕೊಳ್ಳಿ
* ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿ
* ಮನೆಯಲ್ಲಿ ತಯಾರಿಸಿದ ಅಥವಾ ಖಾದಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಬಳಸಿ
* ಹತ್ತಿರ ನಿಂತು ಮಾತನಾಡಬೇಡಿ
* ಮಾರ್ಕೇಟ್ಗೆ ಹೋದಾಗ ಖರೀದಿಗಾಗಿ ಮುಗಿಬೀಳಬೇಡ
* ಅಂಗಡಿಗಳ ಮುಂದೆ ಹಾಕಿದ ಬಾಕ್ಸ್ನಲ್ಲಿ ಅಥವಾ ಕನಿಷ್ಠ ಅಂತರ ಕಾಯ್ದುಕೊಳ್ಳಿ
* ಸೀನು, ಕೆಮ್ಮು ಬಂದಾಗ ಕರವಸ್ತ್ರವನ್ನು ಮುಖಕ್ಕೆ ಹಿಡಿದುಕೊಳ್ಳಿ
* ಸೋಪು ಅಥವಾ ಹ್ಯಾಂಡ್ವಾಶ್ನಿಂದ ಮೇಲಿಂದ ಮೇಲೆ ಕೈ ತೊಳೆದುಕೊಳ್ಳಿ
* ಚರ್ಮದ ಆರೋಗ್ಯಕ್ಕಾಗಿ ಸಾಬುನು, ಹ್ಯಾಂಡ್ವಾಶ್ ಉತ್ತಮ
* ಮನೆಯಿಂದ ಹೊರಗಡೆ ಹೋದಾಗ ನೀರು ಇಲ್ಲದಾಗ ಮಾತ್ರ ಸ್ಯಾನಿಟೈಸರ್ ಬಳಸಿ
* ಸಾರ್ವಜನಿಕ ಶೌಚಾಲಯ ಬಳಸುವಾಗ ಎಚ್ಚರ ಅಗತ್ಯ