ಧಾರವಾಡ prajakiran.com : ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದ ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಅದೇ ಗ್ರಾಮದ ಇನ್ನೊಬ್ಬ ಆರೋಪಿ ಸಮೀರ್ ಮುಲ್ಲಾನವರ ಕೊನೆಗೂ ಧಾರವಾಡ ತಾಲೂಕಿನ ಗರಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಜಾಕಿರಣ.ಕಾಮ್ ಗೆ ಈ ಕುರಿತು ಪೊಲೀಸರು ಖಚಿತಪಡಿಸಿದ್ದಾರೆ.
ಮೇ.21 ರಂದು ಬಾಲಕಿ ಮೇಲೆ ಮಾದನಬಾವಿ ಗ್ರಾಮದ ಪ್ರಮುಖ ಆರೋಪಿ ಬಸವರಾಜ ಕೆರಾಳೆ ಗೆ ಈ ಆರೋಪಿ ಸಮೀರ್ ಮುಲ್ಲಾನವರ ಸಹಕಾರ ನೀಡಿದ್ದ ಎಂಬುದರ ಕುರಿತು ಗಂಭೀರ ಆರೋಪ ಕೇಳಿಬಂದಿತ್ತು.
ಬಸವರಾಜ ಆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಈ ಸಂಬಂಧ ಗರಗ ಠಾಣೆಯಲ್ಲಿ ಆಕೆಯ ಸಾವಿನ ನಂತರ ಪೋಷಕರು ದೂರು ನೀಡಿದ್ದರು.
ಆದರೆ, ಈ ಪ್ರಕರಣ ಅಷ್ಟೊಂದು ಗಂಭೀರತೆ ಪಡೆದಿರಲಿಲ್ಲ. ಬೋಗೂರು ಗ್ರಾಮದ ಬಾಲಕಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ನಂತರ ಸಾಕಷ್ಟು ಜನರು ಈ ಬಗ್ಗೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.
ಈವರೆಗೆ ಘಟನೆ ಸಂಬಂಧ ಕೇವಲ ಬಸವರಾಜ ಕೆರಾಳೆ ಎಂಬಾತನನ್ನು ಮಾತ್ರ ಗರಗ ಪೊಲೀಸರು ಬಂಧಿಸಿದ್ದರು. ಈತ ಕಣ್ಮರೆಯಾಗಿದ್ದ.
ನಿನ್ನೆಯಷ್ಟೇ ಧಾರವಾಡ ಎಸ್ಪಿ ವರ್ತಿಕಾ ಕಟಿಯಾರ್ ಅವರು ಎರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.
ಅಲ್ಲದೆ, ಸ್ವತಃ ರಾಜ್ಯ ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ದು ಅವರು ಮಾದನಬಾವಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
ಈ ಘಟನೆ ನಡೆದು ಮೂರು ತಿಂಗಳಾಗಿದ್ದರೂ ಇನ್ನೋರ್ವ ಆರೋಪಿ ಸಮೀರ್ ಮುಲ್ಲಾನವರನನ್ನು ಬಂಧಿಸದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಅಲ್ಲದೆ, ಈ ಪ್ರಕರಣಕ್ಕೆ ರಾಜಕೀಯ ತಳಕು ಹಾಕಿಕೊಂಡಿದ್ದರ ಕುರಿತು ಕೂಡ ಗುಸು ಗುಸು ಕೇಳಿಬಂದಿತ್ತು.
ಯಾವಾಗ ಬೋಗುರ ಗ್ರಾಮದ ಘಟನೆ ಕಾವು ಪಡೆದುಕೊಂಡಿತೋ ಇದೀಗ ಸಮೀರ್ ನನ್ನು ಕೂಡ ಗರಗ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಸ್ವಲ್ಪ ಸಮಾಧಾನ ತಂದಿದೆ.