ಧಾರವಾಡ Prajakiran.com : ಕೋವಿಡ್ ರೋಗ ಲಕ್ಷಣ ಇಲ್ಲದ ಪಾಸಿಟಿವ್ ವ್ಯಕ್ತಿಗಳನ್ನು ನಿಯಮಾನುಸಾರ ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸಬೇಕು.
ಜಿಲ್ಲೆಯ ಎಲ್ಲಾ ಐಎಲ್ಐ ಲಕ್ಷಣಗಳುಳ್ಳ ಜನರನ್ನು ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಈಗ ಕೋವಿಡ್ ನಿರ್ವಹಣೆಯೇ ಎಲ್ಲಾ ಇಲಾಖೆಗಳ ಮೊದಲ ಆದ್ಯತೆಯಾಗಿದೆ.
ಎಲ್ಲಾ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳು ಇವೆ.ರೋಗದ ಲಕ್ಷಣ ಇಲ್ಲದ ಪಾಸಿಟಿವ್ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸಬಹುದು.
ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿ ಪ್ರತಿದಿನ ಐಎಲ್ಐ ಪ್ರಕರಣಗಳ ವರದಿ ನೀಡದ ಆಸ್ಪತ್ರೆಗಳ ನೋಂದಣಿ ಅಮಾನತ್ತುಗೊಳಿಸಲು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.
ಬೇರೆ ಜಿಲ್ಲೆಗಳಿಂದ ಆಗಮಿಸಿ ನೇರವಾಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಅವರ ಸ್ಥಳೀಯ ವಿಳಾಸದಲ್ಲಿ ಖುದ್ದಾಗಿ ಮಾಹಿತಿ ಸಂಗ್ರಹಿಸಿ ಸೋಂಕು ಹೊಂದಿದ ವ್ಯಕ್ತಿಗಳು ಭೇಟಿ ನೀಡದಿರುವುದು ಖಚಿತಪಟ್ಟರೆ ಆ ಪ್ರದೇಶ ಸೀಲ್ ಡೌನ್ ಮಾಡುವುದರಿಂದ ವಿನಾಯಿತಿ ನೀಡಬಹುದು.
ಹೋಂ ಕ್ವಾರಂಟೈನ್ ಉಲ್ಲಂಘಿಸುವವರ ಪಟ್ಟಿಯನ್ನು ಪೊಲೀಸರಿಗೆ ಒದಗಿಸಿ ಅವರ ಮೂಲಕ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಅವಳಿನಗರದಲ್ಲಿ 19 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 32 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.
ಇವುಗಳಲ್ಲಿ ಕನಿಷ್ಠ ಶೇ.50 ರಷ್ಟು ಕಡೆಗಳಲ್ಲಿ ಮೂಗು ಮತ್ತುಕೋವುಡ್ ಗಂಟಲು ದ್ರವ ಸಂಗ್ರಹಣೆ ಕಾರ್ಯ ಪ್ರಾರಂಭಿಸಬೇಕು.ಗ್ರಾಮೀಣ ಜನರು ತಮ್ಮ ಸಮೀಪದ ಸ್ಥಳಗಳಲ್ಲಿಯೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ಸೌಲಭ್ಯ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್,ಕಿಮ್ಸ್ ತಜ್ಞ ವೈದ್ಯ ಡಾ.ಲಕ್ಷ್ಮೀಕಾಂತ ಲೋಕರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಕೆ.ಮಾನಕರ್ ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಡಾ.ಶಶಿ ಪಾಟೀಲ, ಡಾ.ಎಸ್.ಎಂ.ಹೊನಕೇರಿ,ಡಾ.ಶಶಿಕಲಾ ನಿಂಬಣ್ಣವರ, ಡಾ.ತನುಜಾ , ಔಷಧ ನಿಯಂತ್ರಣ ಇಲಾಖೆ ಉಪನಿರ್ದೇಶಕ ಕೆ.ಎಸ್.ಮಲ್ಲಿಕಾರ್ಜುನ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.