ಧಾರವಾಡ prajakiran.com : ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಸೈಕಲ್ ಜಾಥಾ ನಡೆಸಲಾಯಿತು.
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕಳೆದ ೬ ವರ್ಷದಿಂದ ಸರಾಸರಿ ಪ್ರತಿ ಬ್ಯಾರಲ್ಗೆ ಕನಿಷ್ಠ ೧೬ ಡಾಲರ್ ಮತ್ತು ಗರಿಷ್ಠ ೫೩ ಡಾಲರ್ ಇದ್ದು ಇತಿಹಾಸದಲ್ಲಿ ದಾಖಲೆ ಪ್ರಮಾಣದಲ್ಲಿ ಕಡಿಮೆ ಇದೆ.
ಹೀಗಿದ್ದರೂ ಪ್ರಮಾಣದಲ್ಲಿ ಪೆಟ್ರೋಲ ದರ ಪ್ರತಿದಿನ ಏರಿಕೆಯಾಗುತ್ತಿದೆ. ಅಲ್ಲದೇ ಇತ್ತೀಚೆಗೆ ಕೇಂದ್ರ ಸರಕಾರ ಅಡುಗೆ ಅನಿಲ ಸಬ್ಸಿಡಿ ರದ್ದು ಮಾಡಿ ಜನರ ಮೇಲೆ ಅಧಿಕ ಹೊರೆ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಟೀಕಿಸಿದರು.
ಅಲ್ಲದೇ ಇಲ್ಲಿನ ಗಾಂಧಿನಗರ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ರಸ್ತೆ ರಿಪೇರಿ ಮಾಡಬೇಕು. ಯುಜಿಡಿ ಸಂಪರ್ಕ ಕಲ್ಪಿಸಬೇಕು.
ನಿರಂತರ ನೀರು ಸರಬರಾಜು ಯೋಜನೆ ಒದಗಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು.
ಜಾಥಾ ಮೂಲಕ ಧಾರವಾಡ ಗಾಂಧಿನಗರದ ಬಂಡೆಮ್ಮ ಗುಡಿಯಿಂದ ಪ್ರಾರಂಭಿಸಿ ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಅರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎಚ್.ನೀರಲಕೇರಿ, ಮಂಜುನಾಥ ಭೋವಿ, ಸ್ವಾತಿ ಮಾಳಗಿ, ಶಾಂತಮ್ಮ ಗುಜ್ಜಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.