ಧಾರವಾಡ/ಬೆಳಗಾವಿ prajakiran.com : ಭಾನುವಾರ ಸಂಜೆ ಧಾರವಾಡ-ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಎರಡು ಜಿಲ್ಲೆಗಳಲ್ಲಿ ಜನಜೀವನ ಕೆಲ ಕಾಲಅಸ್ತವ್ಯಸ್ತಗೊಂಡಿತು.
ಕುಂದಾನಗರಿ ಬೆಳಗಾವಿ ಹಾಗೂ ಧಾರವಾಡದಲ್ಲಿ ಕೆಲಮನೆಗಳಿಗೆ ನೀರು ನುಗ್ಗಿದೆ. ಮಳೆ ಆರ್ಭಟಕ್ಕೆ ತಗ್ಗು ಪ್ರದೇಶದ ಜನರು ತತ್ತರಗೊಂಡಿದ್ದಾರೆ.
ಬೆಳಗಾವಿಯ ಶಾಹುನಗರದ ಕೆಲ ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಜನತೆ ಪರದಾಡಬೇಕಾಯಿತು. ಅಲ್ಲದೆ, ಮಳೆ ನೀರು ನುಗ್ಗಿದ್ದರಿಂದ ಅದನ್ನು ಹೊರ ಹಾಕಲು ಹರ ಸಾಹಸ ಮಾಡಿದರು.
ಇನ್ನೂ ಬೆಳಗಾವಿಯ ವಡಗಾವಿಯಲ್ಲಿ ಐದು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಇದರಿಂದ ಒಬ್ಬರಿಗೆ ಗಾಯವಾಗಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅದೇ ರೀತಿ ವಿದ್ಯಾನಗರಿ ಧಾರವಾಡದಲ್ಲೂ ಕೂಡ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಕಂಡು ಬಂದಿದೆ.
ಇದು ಪ್ರತಿ ಬಾರಿ ಮಳೆ ಬಂದಾಗಲೂ ಜನರ ಪರದಾಟ ನಡೆಯುತ್ತಿದೆ. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.