ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸ್ ಆಯುಕ್ತ ಆರ್ . ದಿಲೀಪ ಅವರು ಕಟ್ಟು ನಿಟ್ಟಿನ ಖಡಕ್ ಸೂಚನೆ ನೀಡಿದ್ದಾರೆ.
ಹೀಗಾಗಿ ಧಾರವಾಡದ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಲವಾರು ರೌಡಿಗಳನ್ನು ಪೊಲೀಸರು ಹುಡುಕಾಡಿ ತಂದು ರೌಡಿಶೀಟರ್ ಗಳ ಪರೇಡ್ ಮಾಡುತ್ತಿದ್ದಾರೆ.
ಬೆಳ್ಳಂ ಬೆಳಗ್ಗೆ ಗಲ್ಲಿ ಗಲ್ಲಿಗಳಿಗೆ ತೆರಳಿ ಕಾರ್ಯಾಚರಣೆಗೆ ಇಳಿಯುತ್ತಿರುವ ಪೊಲೀಸರು ಅವರನ್ನು ಠಾಣೆಗೆ ಕರೆ ತಂದು ಹಿರಿಯ ಅಧಿಕಾರಿಗಳ ಎದುರು ಹಾಜರು ಪಡಿಸಲು ಹರಸಾಹಸ ನಡೆಸುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಧಾರವಾಡದಲ್ಲಿ ಹೆಡೆ ಬಿಚ್ಚದಂತೆ ರೌಡಿಗಳ ನಿಯಂತ್ರಣಕ್ಕಾಗಿ ಎಸಿಪಿ ಅನುಷಾ ಜಿ. ಅವರು ಧಾರವಾಡ ಶಹರ ಪೊಲೀಸ್ ಠಾಣೆ, ಉಪನಗರ ಪೊಲೀಸ್ ಠಾಣೆ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೌಡಿಶೀಟರ್ ಗಳನ್ನು ತಮ್ಮ ಕಚೇರಿಗೆ ಕರೆಸಿ ಸರಿಯಾಗಿ ಬೆಂಡು ಎತ್ತುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೇ ಒಂದೇ ದಿನ ಮೂರು ಪೊಲೀಸ್ ಠಾಣೆ ವ್ಯಾಪ್ತಿಯ ಸರಿ ಸುಮಾರು 30-40 ರೌಡಿಶೀಟರ್ ಗಳನ್ನು ಕರೆಸಿ ಬಿಸಿ ತಾಕಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ.
ಭಾನುವಾರವೂ ಈ ಕೆಲಸ ಮುಂದುವರೆದಿದ್ದು, ಪ್ರತಿನಿತ್ಯ ಒಂದೊಂದು ಠಾಣೆಯಿಂದ ಐದಾರು ರೌಡಿಶೀಟರ್ ಗಳನ್ನು ಕರೆದು ಬೆಂಡೆತ್ತುವ ಕೆಲಸ ನಡೆಸಲಾಗುತ್ತಿದೆ.
ಇದು ಧಾರವಾಡದಲ್ಲಿ ಹೆಚ್ಚುತ್ತಿರುವ ರೌಡಿಸಂ ಮಟ್ಟ ಹಾಕಲು ಹಾಗೂ ಮರಿ ಪುಡಾರಿಗಳಿಗೆ ಬಿಸಿ ತಾಕಿಸಲು ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.