ರಾಜ್ಯ

ಧಾರವಾಡದ ಕೆ ಇ ಎಸ್ ಅಧಿಕಾರಿಗೆ ಕೊನೆಗೂ ಸ್ವಯಂ ನಿವೃತ್ತಿಗೆ ಸಮ್ಮತಿ

ಮಹದೇವ ಮಾಳಗಿ ಕುಟುಂಬದ ದಯನೀಯ ಸ್ಥಿತಿಗೆ ಮರುಗಿದ ಶಿಕ್ಷಣ ಸಚಿವರು

ಧಾರವಾಡ prajakiran.com : ಧಾರವಾಡದ ಕೆ ಇ ಎಸ್ ಅಧಿಕಾರಿ ಮಹಾದೇವ ಮಾಳಗಿ ಅವರಿಗೆ ಕೊನೆಗೂ ಸ್ವಯಂ ನಿವೃತ್ತಿ ಹೊಂದಲು ರಾಜ್ಯ ಸರಕಾರ ಸಮ್ಮತಿ ಸೂಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಸಂಪೂರ್ಣಅಸಹಾಯಕ ಸ್ಥಿತಿಯಲ್ಲಿದ್ದು, ಹಾಸಿಗೆ ಹಿಡಿದು ಆರು ವರ್ಷಗಳೇ ಕಳೆದರೂ ಮಾಳಗಿ ಅವರ ನೆರವಿಗೆ ಆಳುವ ಸರಕಾರಗಳು ಬಂದಿರಲಿಲ್ಲ.

ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.  ಕೊನೆಗೂ ಶಿಕ್ಷಣ ಸಚಿವರ ಸೂಚನೆ ಮೇರೆಗೆ ಎಚ್ಚೆತ್ತುಕೊಂಡಿರುವುದು ಸಮಾಧಾನದ ಸಂಗತಿಯಾಗಿದೆ.

ಈ ಬಗ್ಗೆ ಪ್ರಜಾಕಿರಣ.ಕಾಮ್ ಸಮಗ್ರ ವರದಿ ಪ್ರಕಟಿಸಿ ಸರಕಾರದ ಗಮನ ಸೆಳೆದಿತ್ತು.ಅದಕ್ಕೆ ಸ್ಪಂದಿಸಿದ ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ, ಕರ್ನಾಟಕ ಸರಕಾರಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪಅಂಡಗಿ ಚಿಲವಾಡಗಿ ಸರಕಾರದ ಗಮನ ಸೆಳೆದಿದ್ದರು.

ಅಲ್ಲದೆ, ಶಿಕ್ಷಣ ಸಚಿವ ಸುರೇಶಕುಮಾರ್ ಅವರು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇವಲ ಒಂದು ವಾರದಲ್ಲಿ ಸ್ವಯಂ ಇಚ್ಛಾ ನಿವೃತ್ತಿ ಹೊಂದಲು ಅವಕಾಶ ಕಲ್ಪಿಸಿದ್ದಾರೆ.

ಶಿಕ್ಷಕರ ದಿನಾಚರಣೆ ದಿನದಂದು ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ತಮ್ಮ ನೆರವಿಗೆ ಬರುವಂತೆ ಶಿಕ್ಷಣ ಸಚಿವ ಸುರೇಶಕುಮಾರ್ ಹಾಗೂ  ಮುಖ್ಯಮಂತ್ರಿ ಯಡಿಯೂರಪ್ಪ ವರಿಗೆ ಮಹಾದೇವ ಮಾಳಗಿ ಪತ್ನಿ ಪ್ರಭಾವತಿ ಪ್ರಜಾಕಿರಣ.ಕಾಮ್ ಮೂಲಕ ಮನವಿ ಮಾಡಿದ್ದರು.     

 ಪತಿ ನಿವೃತ್ತಿಗೆ ಸಮ್ಮತಿ ನೀಡಿರುವ ಸಚಿವರು  ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಸಬೇಕು ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.   

ಮಹಾದೇವ ಮಾಳಗಿ ಅವರ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಅಭಿನಂದಿಸಿದ್ದಾರೆ.

ಜೊತೆಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮಹಾದೇವ ಮಾಳಗಿ ಪ್ರಕರಣದ ವಿವರ :

ಆರು ವರ್ಷದಿಂದ ಕೆ ಇ ಎಸ್ ಅಧಿಕಾರಿ ಮಹಾದೇವ ಮಾಳಗಿಯ ದಯನೀಯ ಸ್ಥಿತಿಗೆ ಮರುಕ ಪಡದವರೇ ಇಲ್ಲ. ಇಷ್ಟೆಲ್ಲಾ ಆದರೂ ಸ್ಪಂದಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸಿದ್ದರು.

ಮಹಾದೇವ ಮಾಳಗಿ ೧೯೯೯ ತಂಡದ ಕೆಇಎಸ್ ಅಧಿಕಾರಿಯಾಗಿದ್ದರು. ಚಿಕ್ಕೋಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೃತ್ತಿ ಪ್ರಾರಂಭಿಸಿದ ಅವರು, ನಂತರ ಕೊಪ್ಪಳ, ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದರು.

ಕಲಘಟಗಿಯಲ್ಲಿ ಉತ್ತಮ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಪ್ರಶಸ್ತಿ ಪಡೆದು ಬೆಳಗಾವಿ ಡಯಟ್‌ಹಿರಿಯ ಉಪನ್ಯಾಸಕರಾಗಿ ನೇಮಕಗೊಂಡಿದ್ದರು.

ಕರ್ತವ್ಯದಲ್ಲಿರುವಾಗಲೇ ಬ್ರೇನ್ ಸ್ಟ್ರೋಕ್ ಆಗಿ ಪ್ರಜ್ಞೆ ಕಳೆದುಕೊಂಡಿದ್ದರು. ಸುಮಾರು ಐದಾರು ತಿಂಗಳು ಕೋಮಾದಲ್ಲೇ ಇದ್ದ ಮಾಳಗಿ ಅವರಿಗೆ ಈಗಲೂ ಸಹ ಪ್ರಪಂಚದ ಅರಿವೇ ಇಲ್ಲದಂತೆ  ಬದುಕು ಸಾಗಿಸುತ್ತಿದ್ದಾರೆ.

ಆರು ವರ್ಷಗಳಿಂದ ಹಾಸಿಗೆ ಹಿಡಿದರೂ ಸರಕಾರ ಸ್ವಯಂ ನಿವೃತ್ತಿ ನೀಡಲು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮನಸ್ಸು ಮಾಡಲಿಲ್ಲ. ಇದರಿಂದಾಗಿ ಕುಟುಂಬ ಸಂಪೂರ್ಣ ಇಕ್ಕಟ್ಟಿಗೆ ಸಿಲುಕಿತ್ತು.

ಒಂದು ಸ್ವಂತ ನಿವೇಶನ, ಮನೆಯನ್ನೂ ಕೂಡ ಹೊಂದಿರದ ಮಹಾದೇವ ಮಾಳಗಿ ಅವರ ಪತ್ನಿ ಪ್ರಭಾವತಿ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ತವರು ಮನೆಯಲ್ಲಿಯೇ ವಾಸಿಸುತ್ತಿದ್ದಾರೆ.

ಒಂದು ಕಡೆ ಹಣಕಾಸಿನ ತೊಂದರೆ, ಮತ್ತೊಂದು ಕಡೆ ಪತಿಯ ಚಿಕಿತ್ಸೆ ವೆಚ್ಚ, ಆರೈಕೆ ಮಾಡುವ ಸವಾಲು ಎದುರಾಗಿತ್ತು.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *