ಧಾರವಾಡ ಪ್ರಜಾಕಿರಣ.ಕಾಮ್ : ಈಗ ಚುನಾವಣೆ ಬಂದಿದ್ದು, ಅರವಿಂದ ಬೆಲ್ಲದ ಅವರಿಗೆ ಪ್ರತ್ಯೇಕ ಮಹಾನಗರ ಪಾಲಿಕೆ ನೆನಪಾಗಿದೆ ಎಂದು ಅರವಿಂದ ಬೆಲ್ಲದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಲೇ ಇದೆ.
ಇದಕ್ಕಾಗಿ ಹುಟ್ಟಿಕೊಂಡ ಹೋರಾಟ ಸಮಿತಿಯಲ್ಲಿ ನಾನು ಪಕ್ಷಾತೀತವಾಗಿ ಪಾಲ್ಗೊಂಡೆ. ಎಲ್ಲಾ ಕಡೆಗಳಲ್ಲೂ ನಾನು ಪ್ರತ್ಯೇಕ ಮಹಾನಗರ ಪಾಲಿಕೆ ಸಂಬಂಧ ಬ್ಯಾನರ್ ಹಾಕಿಸಿದ್ದೆ ಎಂದರು.
19 ದಿನ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಹೋರಾಟ ಕೂಡ ಮಾಡಲಾಗಿತ್ತು. ಆಗ ಎಚ್.ಕೆ.ಪಾಟೀಲ ಒಬ್ಬರೇ ಇದಕ್ಕೆ ಸ್ಪಂದಿಸಿದ್ದರು.
ನನ್ನ ಪ್ರಣಾಳಿಕೆಯಲ್ಲೂ ಪ್ರತ್ಯೇಕ ಮಹಾನಗರ ಪಾಲಿಕೆಗೆ ನಾನು ಒತ್ತು ಕೊಟ್ಟಿದ್ದೇನೆ. ಇದು ಬೆಲ್ಲದ ಅವರಿಗೆ ತಡವಾಗಿ ಗೊತ್ತಾಗಿದೆ. ಸೋಲಿನ ಭೀತಿಯಲ್ಲಿರುವ ಬೆಲ್ಲದ ಈಗ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ನಾನು ಯಾವುದೇ ರಾಜಕಾರಣ ಇಲ್ಲದೇ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂದು ಹಕ್ಕು ಮಂಡನೆ ಮಾಡಿದ್ದೆ. ಆಗ ಬೆಲ್ಲದ ಅವರು ಅದಕ್ಕೆ ಸ್ಪಂದಿಸಿರಲಿಲ್ಲ.
ಮಲಗಿಕೊಂಡಿದ್ದ ಬೆಲ್ಲದ ಅವರು ಈಗ ಯಾರೋ ಎಬ್ಬಿಸಿದ್ದಾರೆ. ಆ ಮೂಲಕ ಅವರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಲ್ಲದ ಈ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ಚುನಾವಣೆ ಬಂದಿರುವ ಸಂದರ್ಭದಲ್ಲಿ ಈಗ ಮಾತನಾಡುತ್ತಿದ್ದಾರೆ ಎಂದು ಬೆಲ್ಲದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.