ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೊರಾಗಿ ನಡೆಯುತ್ತಿದೆ.
ಧಾರವಾಡದ ಸತ್ತೂರ ಬಳಿಯ ಉದಯಗಿರಿ ಡಬಲ್ ರೋಡ್ ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡ ಮೇಲೆ ಬೆಟ್ಟಿಂಗ್ ಆಡಿಸಿಕೊಳ್ಳುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಹುಬ್ಭಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನವಲೂರಿನ ಅರ್ಜುನ ಮೋಹನ ನಲವಡಿ (28) ಹಾಗೂ ಎಂ. ಆರ್. ನಗರದ ಈರೇಶ ಚನ್ನಬಸಪ್ಪ ಎಣಿಗಾರ (28) ಎಂದು ಗುರುತಿಸಲಾಗಿದೆ.
ಪ್ರತಿ ತಂಡಗಳ ಆಟಗಾರರ ಮೇಲೆ, ಅವರ ವಿಕೆಟ್ ಹಾಗೂ ರನ್ ಗಳ ಆಧಾರದ ಮೇಲೆ ಹಣ ಕಟ್ಟಿಸಿಕೊಳ್ಳಲಾಗುತ್ತಿತ್ತು ಎಂದು ಖಚಿತ ಮಾಹಿತಿ ಮೇರೆಗೆ ಹುಬ್ಭಳ್ಳಿ-ಧಾರವಾಡ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಅಲ್ತಾಫ್ ಮುಲ್ಲಾ ಹಾಗೂ ಅವರ ತಂಡ ಈ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತರಿಂದ 11 ಸಾವಿರ ನಗದು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ವಿದ್ಯಾಗಿರಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಬಸಾಪೂರ ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.