ಧಾರವಾಡ prajakiran.com : ಶಾಲಾ,ಕಾಲೇಜುಗಳ ಬಳಿ ತಂಬಾಕು ಸೇವನೆ, ಧೂಮಪಾನ ಮಾಡುವವರು ಮತ್ತು ತಂಬಾಕು ಉತ್ಪನ್ನಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡುವವರ ವಿರುದ್ಧ ಕೋಟ್ಪಾ ಕಾಯ್ದೆಯ ಸೆಕ್ಷನ್ 4 ಹಾಗೂ 6ರಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗುಟಕಾ,ತಂಬಾಕು,ಧೂಮಪಾನ ಸೇವನೆ ಮತ್ತು ಉಗುಳುವವರ ವಿರುದ್ಧ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (ಐಪಿಸಿ) 188,268,269 ಹಾಗೂ 270 ರಡಿ ನಗರ ಸ್ಥಳೀಯಸಂಸ್ಥೆಗಳು ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳಬೇಕು.
ಪಾನ್ ಶಾಪುಗಳಲ್ಲಿ ಮಾಸ್ಕ್ ಬಳಸದಿರುವವರಿಗೂ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಾಗ ಅವುಗಳ ಪ್ಯಾಕುಗಳ ಮೇಲೆ ಅವುಗಳ ಸೇವನೆಯಿಂದ ಉಂಟಾಗುವ ಹಾನಿಯ ಅಪಾಯ ಬಿಂಬಿಸುವ ಸಚಿತ್ರ ಮಾಹಿತಿ ಶೇ.85 ರಷ್ಟು ಇರುವುದು ಕಡ್ಡಾಯವಾಗಿದೆ.
ಪಾನ್ ಶಾಪುಗಳ ಮುಂಭಾಗದಲ್ಲಿ ಲೈಟರು ,ಬೆಂಕಿಪೊಟ್ಟಣಗಳನ್ನು ಇಡುವುದೂ ಕೂಡ ಅಪರಾಧವಾಗಿದೆ. ಇದನ್ನು ನಿಯಂತ್ರಿಸಲು ಜಿಲ್ಲೆಯಾದ್ಯಂತ ದಾಳಿಗಳ ಪ್ರಮಾಣ ಹೆಚ್ಚಾಗಬೇಕು ಎಂದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಆರೋಗ್ಯ, ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳು, ವಾಕರಸಾಸಂ,ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗಳ ತಾಲೂಕುವಾರು ಪ್ರಗತಿ ಪರಿಶೀಲಿಸಿದರು.
ಕೋಟ್ಪಾ ( Cigarette and other tobacco products act) ಕಾಯ್ದೆಯ ಸೆಕ್ಷನ್ 6 ಬಿ ಪರಿಣಾಮಕಾರಿ ಅನುಷ್ಠಾನ, ಕಾಯ್ದೆಯ ಸೆಕ್ಷನ್ 5 ಮತ್ತು 7 ರ ಉಲ್ಲಂಘನೆ ಮಾಡುವವರ ವಿರುದ್ಧ ಕೈಗೊಂಡ ಕ್ರಮಗಳು, ಜಿಲ್ಲಾಡಳಿತದ ಅಂತರ್ಜಾಲ ತಾಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮಾಹಿತಿಯನ್ನು ಅಳವಡಿಕೆ, ನಿಯಮಾವಳಿಗಳನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಪುನರ್ ಮನನ ಮಾಡುವುದು.
ಇ ಸಿಗರೇಟ್ ನಿಷೇಧ. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿ , ಎಲ್ಲಾ ಶಾಲೆ ಕಾಲೇಜುಗಳನ್ನು ತಂಬಾಕು ಮುಕ್ತ ಎಂದು ಘೋಷಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾ ಹಾಗೂ ಕಾರ್ಯಕ್ರಮಾಧಿಕಾರಿ ಡಾ.ಸುಜಾತಾ ಹಸವಿಮಠ ಮಾತನಾಡಿ, ತಂಬಾಕು ನಿಯಂತ್ರಣ ಕೋಶದ ಮೂಲಕ ಜಿಲ್ಲೆಯಾದ್ಯಂತ ತರಬೇತಿ,ದಾಳಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಏಪ್ರೀಲ್ ನಿಂದ ನವೆಂಬರ್ ಅಂತ್ಯದವರೆಗೆ 331 ಪ್ರಕರಣಗಳನ್ನು ದಾಖಲಿಸಿ 37510 ರೂ.ಗಳ ದಂಡ ಸಂಗ್ರಹಿಸಲಾಗಿದೆ ಎಂದು ಪ್ರಗತಿ ಮಾಹಿತಿಯನ್ನು ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ,ಡಿವೈಎಸ್ ಪಿ ರಾಮನಗೌಡ ಹಟ್ಟಿ, ಕಿಮ್ಸ್ ಸಮುದಾಯ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ಲೋಕರೆ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನಕುಮಾರ್ ಹಂಚಾಟೆ,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್ ಮಾನಕರ್, ಔಷಧ ನಿಯಂತ್ರಣ ಉಪನಿರ್ದೇಶಕ ಕೆ.ಎಸ್.ಮಲ್ಲಿಕಾರ್ಜುನ,ಡಾ.ಎಸ್.ಬಿ.ನಿಂಬಣ್ಣವರ, ಡಾ.ಶಶಿ ಪಾಟೀಲ,ಡಾ.ಅಯ್ಯನಗೌಡ ಪಾಟೀಲ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.