ಧಾರವಾಡ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತೈಲ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಹೀಗಾಗಿ ಇಂದು ಪೆಟ್ರೋಲ್ ಬೆಲೆ ಶತಕ ಸಮೀಪಿಸಿದೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆರೋಪಿಸಿದರು.
ಅವರು ಧಾರವಾಡದಲ್ಲಿ ಶನಿವಾರ ಕೋರ್ಟ್ ಬಳಿಯ ಜ್ಯೋತಿ ಪೆಟ್ರೋಲ್ ಬಂಕ್ ಮುಂದೆ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಬಡವರ ಖಾತೆಗೆ ತಲಾ ೧೫ ಲಕ್ಷ ರೂಪಾಯಿ ಜಮಾ, ಪ್ರತಿವರ್ಷ ೨ ಕೋಟಿ ಉದ್ಯೋಗ ಸೃಷ್ಠಿ ಹೀಗೆ ಸಾಲು ಸಾಲು ಸುಳ್ಳಿ ಭರವಸೆ ನೀಡಿ ದೇಶದ ಜನತೆಯನ್ನು ಯಾಮಾರಿಸಿರುವುದು ಎಲ್ಲರಿಗೂ ಗೊತ್ತಿದೆ ಎಂದು ಗುಡುಗಿದರು.
೭ ವರ್ಷಗಳಲ್ಲಿ ಪೊಳ್ಳು ಭರವಸೆ ನೀಡಿದ್ದೆ ದೊಡ್ಡ ಸಾಧನೆಯಾಗಿದೆ. ತಾವೇ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಜನರಿಗೆ ವಂಚನೆ ಮಾಡಿದ್ದಾರೆ ಎಂದು ಟೀಕಿಸಿದರು.
ಪೆಟ್ರೋಲ್, ಡೀಸೇಲ್, ಅಡುಗೆ ಅನಿಲ ದರ ದಾಖಲೆಯ ರೀತಿಯಲ್ಲಿ ಹೆಚ್ಚಳ ಕಂಡು ಮಧ್ಯಮ ಮತ್ತು ಬಡವರ್ಗದ ಜನರು ಪರದಾಡುವಂತಾಗಿದೆ. ಜೊತೆಗೆ ಅಗತ್ಯವಸ್ತುಗಳ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದಂತಾಗಿವೆ ಎಂದು ಆರೋಪಿಸಿದರು.
ನೆರೆಯ ರಾಷ್ಟ್ರಗಳಲ್ಲಿ ತೈಲ ಬೆಲೆ ಕಡಿಮೆ ಇದ್ದಾಗಲೂ ಭಾರತದಲ್ಲಿ ದಾಖಲೆ ರೀತಿಯಲ್ಲಿ ಹೆಚ್ಚಳಗೊಂಡಿವೆ. ಕೊರೊನಾ ನಿರ್ವಹಣೆಯಲ್ಲಿಯೂ ಕೇಂದ್ರ ಮತ್ತು ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರಗಳು ವಿಫಲವಾಗಿದ್ದು, ಸರಕಾರದ ಮೇಲೆ ಜನರು ರೋಸಿ ಹೋಗಿದ್ದಾರೆ ಎಂದು ದೀಪಕ ಚಿಂಚೋರೆ ದೂರಿದರು.
ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಮಾತನಾಡಿ, ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನಡೆಯನ್ನು ಖಂಡಿಸಿದರು. ತಮ್ಮ ವೈಫಲ್ಯ ಮರೆ ಮಾಚಲು ಹಲವರು ತಂತ್ರಗಳನ್ನು ಮಾಡುತ್ತ ಜನರ ಗಮನ ಬೇರೆಡೆ ಸೆಳೆಯುತ್ತಿವೆ ಎಂದು ಆರೋಪಿಸಿದರು.
ದೇಶದ ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರಕಾರ ಜನರನ್ನು ಒಡೆದು ಆಳುವ ಕುತಂತ್ರ ನಡೆಸುತ್ತಿದೆ. ದೇಶದ ಎಲ್ಲ ಜನರನ್ನು ಒಂದೇ ತರಹ ನೋಡದೇ ಜನರ ಮಧ್ಯೆ ಬಿರುಕು ಮೂಡಿಸಿ, ಭಾವನತ್ಮವಾಗಿ ಜನರನ್ನು ಕೆರಳಿಸಿ ಅಧಿಕಾರ ಪಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ ಎಂದರು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ, ಯುವ ಮುಖಂಡ ಇಮ್ರಾನ ಕಳ್ಳಿಮನಿ,ಮುಖಂಡರಾದ ಸುನೀಲ ಹೊಂಗಲ,ಬಸವರಾಜ ಪೂಜಾರ,ಶಿವು ಚನಗೌಡರ, ತಾಯಪ್ಪ ಪವಾರ,ಲೋಖಶೇ ಮ್ಯಾಗೇರಿ,ದತ್ತ ದೊಡ್ಡಮನಿ ಮತಿತರರು ಭಾಗವಬಹಿಸಿದ್ದರು.