ಕಾಲೇಜು ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ
ಸಾಮಾಜಿಕ ಅಂತರ ಕಾಪಾಡಬೇಕು:
ಜಿಲ್ಲಾಧಿಕಾರಿ ನಿತೇಶ ಪಾಟೀಲ
ಧಾರವಾಡ prajakiran.com : ಜಿಲ್ಲೆಯಲ್ಲಿ ಪಿಯು, ಪದವಿ ಕಾಲೇಜುಗಳು ಹಾಗೂ ವೃತ್ತಿಪರ ಕೊರ್ಸ ಕಾಲೇಜುಗಳ ತರಗತಿಗಳು ನಡೆಯುತ್ತಿದ್ದು, ಸಾಕಷ್ಟು ಜಾಗೃತಿ ಮೂಡಿಸಿ, ಕೋವಿಡ್ ಸುರಕ್ಷತೆ ಕುರಿತು ಪ್ರಚಾರ ಮಾಡಿದರೂ ಮತ್ತು ಸರಕಾರ ನೀಡಿರುವ ಮಾರ್ಗಸೂಚಿಗಳನ್ನು (ಎಸ್ಓಪಿ) ತಪ್ಪದೇ ಪಾಲಿಸುವಂತೆ ಎಲ್ಲ ಕಾಲೇಜು ಮುಖ್ಯಸ್ಥರಿಗೆ ಹಾಗೂ ಕಾಲೇಜು ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿದ್ದರೂ ಸರಿಯಾಗಿ ಪಾಲಿಸದಿರುವುದು ಕಂಡುಬರುತ್ತಿದೆ.
ಕಾಲೇಜುಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತಪ್ಪದೆ ಮಾಸ್ಕ್ ಧರಿಸಬೇಕೆಂದು ಮತ್ತು ಪರಸ್ಪರ ಸಾಮಾಜಿಕ ಅಂತರ ಕಾಪಾಡಬೇಕೆಂದು ತಿಳಿಸಿದ್ದಾರೆ.
ಸರಕಾರದ ಎಸ್.ಓ.ಪಿ ಯನ್ನು ಪ್ರತಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಆದರೂ ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ವಹಿಸುತ್ತಿರುವ ಉದಾಸೀನತೆಯೇ ಕಾರಣವಾಗಿದೆ.
ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಆರಂಭಿಸಲಾಗಿದ್ದು ಇಲ್ಲಿವರೆಗೆ ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನಲ್ಲಿ 13, ಜೆ.ಜೆ.ಕಾಮ್ರ್ಸ ಕಾಲೇಜಿನಲ್ಲಿ 5, ಬಿ.ವ್ಹಿ.ಬಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2 ಮತ್ತು ಧಾರವಾಡದ ಮಹೇಶ ಪಿಯು ಕಾಲೇಜಿನಲ್ಲಿ 2 ಹಾಗೂ ಎಸ್.ಡಿ.ಎಮ್. ಇಂಜನಿಯರಿಂಗ್ ಕಾಲೇಜಿನಲ್ಲಿ 18 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಆದ್ದರಿಂದ ಪಾಲಕರು ಹಾಗೂ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಹೆಚ್ಚು ಕಾಳಜಿವಹಿಸಬೇಕು. ಮನೆಯಿಂದ ಹೊರಡುವಾಗ ವಿದ್ಯಾರ್ಥಿಯು ಮಾಸ್ಕ್ ಧರಿಸಿರುವ ಹಾಗೂ ಸ್ಯಾನಿಟೈಜರ್ ಹೊಂದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು.
ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಪ್ರತಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಅಧಿಕಾರಿಗಳು ತಪಾಸಣೆಗೆ ಬಂದಾಗ ನಿಯಮ ಉಲ್ಲಂಘಣೆ ಕಂಡುಬಂದರೆ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬಂದ ತಕ್ಷಣ ತಪ್ಪದೇ ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಜರ್ ಬಳಸಿ, ಕೈ ತೊಳೆದುಕೊಳ್ಳಬೇಕು.
ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಗುಂಪು ಸೇರುವುದು, ಒಂದೇ ಮೇಜಿನಲ್ಲಿ ಕುಳಿತುಕೊಳ್ಳವುದು ಮಾಡಬಾರದು.
ರೋಗ ಲಕ್ಷಣ ಕಂಡು ಬಂದರೆ ಸಮೀಪದ ಸರಕಾರಿ ಆಸ್ಪತ್ರೆಗೆ ಹೋಗಿ ಸ್ವ್ಯಾಬ್ ನೀಡಿ, ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.
ಮತ್ತು ಮುಖ್ಯವಾಗಿ ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರದೇ ಪ್ರತ್ಯೇಕವಾಗಿ (ಐಸೊಲೇಶನ್) ಇರಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.