ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿಯನ್ನು ಶನಿವಾರ ಸಂಜೆ ವಶಕ್ಕೆ ಪಡೆದಿದೆ.
ವಿಜಯಪುರಕ್ಕೆ ತೆರಳಿದ್ದ ಸಿಬಿಐ ಅಧಿಕಾರಿಗಳ ತಂಡ ಧರ್ಮರಾಜ ಚಡಚಣ ತಂಡದ ಹಲವರನ್ನು ವಿಚಾರಣೆಗೆ ಒಳಪಡಿಸಿ, ಅವರು ನೀಡಿದ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಯೋಗೀಶಗೌಡ ಗೌಡರ ಹತ್ಯೆಗೆ ಧರ್ಮರಾಜ ಚಡಚಣ ತಂಡಕ್ಕೆ ಸುಪಾರಿ ನೀಡಲಾಗಿತ್ತು. ಅಲ್ಲದೆ, ಈ ಕುರಿತು ಮಾತುಕತೆ ನಡೆಸಲು ಸ್ವತಃ ಧರ್ಮರಾಜ ಚಡಚಣ ಹಲವು ಬಾರಿ ಧಾರವಾಡದ ಡೈರಿಗೆ ಬಂದು ಹೋಗಿದ್ದ ಎಂಬುದು ಸಿಬಿಐ ತನಿಖೆ ವೇಳೆ ಬಯಲಿಗೆ ಬಂದಿತ್ತು.
ಅದರ ಜಾಡು ಹಿಡಿದ ಸಿಬಿಐ ತಂಡ ಧರ್ಮರಾಜ ಚಡಚಣ ಸಹಚರರು ಚಂದೂ ಮಾಮಾಗೆ ನೀಡಿದ್ದ ಮೂರು ಪಿಸ್ತೂಲ್ ಗಳನ್ನು ಕಳೆದ ತಿಂಗಳು ಜಪ್ತಿ ಮಾಡಿದ್ದರು.
ಆ ಪಿಸ್ತೂಲ್ ಮಾಜಿ ಸಚಿವರ ಮೂಲಕ ಬಸವರಾಜ ಮುತ್ತಗಿ ಸಹಚರರ ಕೈಗೆ ಬಂದು ಸೇರಿದ್ದವು. ಅವುಗಳನ್ನು ಪತ್ತೆ ಮಾಡಿದ್ದ ಸಿಬಿಐ ಈಗ ಚಂದೂ ಮಾಮಾಗೆ ಖೆಡ್ಡಾಕ್ಕೆ ಕೆಡವಿದೆ.
ಈ ಹಿನ್ನಲೆಯಲ್ಲಿ ವಿಜಯಪುರದಿಂದ ಧಾರವಾಡಕ್ಕೆ ಕರೆದುಕೊಂಡು ಬಂದಿದ್ದಾರೆ. ಶನಿವಾರ ರಾತ್ರಿ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಚಂದ್ರಶೇಖರ ಇಂಡಿ ಅಲಿಯಾಸ್ ಚಂದೂ ಮಾಮನನ್ನ ಅಲ್ಲಿಯೇ ರಾತ್ರಿ ಉಳಿಸಿಕೊಂಡಿದ್ದರು.
ಸಿಬಿಐ ವಿಚಾರಣೆ ವೇಳೆ ಚಂದೂ ಮಾಮಾ ಹಲವು ರೋಚಕ ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಚಂದ್ರಶೇಖರ್ ಇಂಡಿಯನ್ನು ಕೂಡ ಸಿಬಿಐ ಅಧಿಕಾರಿಗಳ ತಂಡ ಬಂಧಿಸುತ್ತಾ ಎಂಬುದು ಕಾದು ನೋಡುಬೇಕಿದೆ.