ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೋರಾಟಕ್ಕೆ ಮೊದಲ ಹಂತದ ಜಯ
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿ ಬಿಯಲ್ಲಿ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿವೃತ್ತ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ, ಕಚೇರಿ ವ್ಯವಸ್ಥಾಪಕ ಎಂ.ಕೆ. ಸಿಂಪಿ, ಹಿರಿಯ ಸಹಾಯಕ ಶಂಕರ ತಳವಾರ, ಗುತ್ತಿಗೆ ನೌಕರ ಹೇಮಚಂದ್ರ ಚಿಂತಾಮಣಿ ಹಾಗೂ ಹಲವು ರೈತರು ಮತ್ತು ಐಡಿಬಿಐ ಬ್ಯಾಂಕ್, ಕೆವಿಜಿ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಸೇರಿ 14 ಜನರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಇಪ್ಪತ್ತೈದು ಕೋಟಿ ಹಗರಣದ ಬಗ್ಗೆ
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ದಾಖಲೆ ಬಿಡುಗಡೆ ಮಾಡಿ ಈ ಕುರಿತು ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರಿಗೆ ಲಿಖಿತ ದೂರು ನೀಡಿದ ನಂತರ ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರ ಈ ಕುರಿತು ಮಹತ್ವದ ಹೆಜ್ಜೆ ಇರಿಸಿದೆ.
ಈ ಹಗರಣದಲ್ಲಿ ಭಾಗಿಯಾದ
ಹದಿನಾಲ್ಕು ಜನರ ವಿರುದ್ದ
ಪ್ರಕರಣ ದಾಖಲಿಸಲಾಗಿದೆ.
ಜೊತೆಗೆ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಈ ಬಗ್ಗೆ ಕೆ ಐ ಎ ಡಿ ಬಿ ಧಾರವಾಡ ಜಿಲ್ಲೆಯ ಅಧಿಕಾರಿ ಮಮತಾ ಹೊಸಮನಿಯವರನ್ನು ಪ್ರಜಾಕಿರಣ.ಕಾಮ್ ಸಂರ್ಪಕಿಸಿದಾಗ ಇದನ್ನು ಅವರು ಖಚಿತ ಪಡಿಸಿದ್ದಾರೆ.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಇದು ಬಹು ಕೋಟಿ ಹಗರಣವಾಗಿದ್ದು, ಇದನ್ನು ಸಿಐಡಿ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದರು.
ಅಲ್ಲದೆ, ಈ ಕುರಿತು ಧಾರವಾಡ ಲೋಕಾಯುಕ್ತರಿಗೆ ಕೂಡ ನೊಂದ ರೈತ ಶಿವನಗೌಡ ಪಾಟೀಲ್ ಸೇರಿದಂತೆ ಜನಜಾಗೃತಿ ಸಂಘದ ಪದಾಧಿಕಾರಿಗಳು ದೂರು ಸಲ್ಲಿಸಿದ್ದರು.
ಆದರೂ ರಾಜ್ಯದ ಬಿಜೆಪಿ ಸರಕಾರ ಇದನ್ನು ಮೊದಲ ಹಂತದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಹಿನ್ನೆಲೆಯಲ್ಲಿ 420 ಕೇಸ್ ದಾಖಲಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.
ಈ ಹಗರಣದಲ್ಲಿ ಸಣ್ಣಪುಟ್ಟ ಪತ್ರಿಕೆ ಹೆಸರು ಹೇಳಿಕೊಂಡು ಬದುಕು ಸಾಗಿಸುವ ಕೆಲ ಆಸೆಬುರಕ ಪತ್ರಕರ್ತರು, ಮರಿ ಪುಡಾರಿ ರಾಜಕಾರಣಿಗಳು ಹಾಗೂ ಕೆ ಐ ಎ ಡಿ ಬಿಯ ಏಜೆಂಟ್ ಆಗಿ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪಾಸ್ತಿ ಮಾಡಿದ ದೊಡ್ಡ ಕುಳಗಳು ಇದರಲ್ಲಿ ಭಾಗಿಯಾಗಿದ್ದಾರೆ.
ಅವರನ್ನು ವಿಚಾರಣೆ ನಡೆಸಿ ಕಂಬಿ ಹಿಂದೆ ಹಾಕಿದಾಗ ಮಾತ್ರ ಇದರ ಸತ್ಯಾಂಶ ಹಾಗೂ ಇನ್ನೊಂದು ಕರಾಳ ಮುಖ ಬಯಲಿಗೆ ಬರುತ್ತದೆ.
ಈಗಲಾದರೂ ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಜಾಣ ಕುರುಡು ತೋರಿಸುವುದು ಬಿಟ್ಟು ಬಾಯಿ ಬಿಡಬೇಕು.
ಕೆ ಐ ಎ ಡಿ ಬಿಯ ದುಷ್ಟ ಹಾಗೂ ಭ್ರಷ್ಟ ವ್ಯವಸ್ಥೆಯನ್ನು ಕಣ್ಣು ತೆರೆದುನೋಡಬೇಕು ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.