ಧಾರವಾಡದ ನರೇಂದ್ರದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ
ಧಾರವಾಡ ಪ್ರಜಾಕಿರಣ.ಕಾಮ್ : ಸಮಾಜಕ್ಕೆ ಪ್ರಯೋಜನ ಆಗುವ ಕೆಲಸ ಯಾವುದೇ ರೂಪದಲ್ಲಿ ಇದ್ದರೂ ಅದು ಜನರನ್ನು ತಲುಪುತ್ತದೆ ಎಂದು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನಮಠದ ಶ್ರೀ ಸಂಗಮೇಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಸೋಮವಾರ ಮಠದಲ್ಲಿ ಜನಜಾಗೃತಿ ಸಂಘದ 2024ರ ದಿನದರ್ಶಿಕೆ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ದಿನದರ್ಶಿಕೆಗಳು ನಮ್ಮ ಬದುಕಿಗೆ ಶಿಸ್ತು ಮತ್ತು ಸಮಯಪಾಲನೆ ಸೂಚಿಸುವ ಮಾರ್ಗದರ್ಶಿಗಳು. ನಿತ್ಯದ ಕಾಯಕಗಳಿಗೆ ಸೂಕ್ತ ದಿನ ಮತ್ತು ಸಮಯ ನಿರ್ಧರಿಸಿಕೊಳ್ಳಲು ಬಹು ಉಪಕೃತ ಸಾಧನಗಳು.
ಜನಜಾಗೃತಿ ಸಂಘವು ಕಳೆದ ಕೆಲವು ವರ್ಷಗಳಿಂದ ಕ್ಯಾಲೆಂಡರ್ ಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಸ್ತುತ್ಯ ಕಾರ್ಯ.
ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಸದಾ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನೋಪಕಾರಿ ಎನಿಸಿದ್ದಾರೆ. ಅವರ ಸಮಾಜ ಸೇವೆ ನಿರಂತರವಾಗಲಿ ಎಂದು ಸ್ವಾಮೀಜಿ ಹಾರೈಸಿದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ,
ಕ್ಯಾಲೆಂಡರ್ ಗಳು
ಜನರು ಮಾರುಕಟ್ಟೆಯಲ್ಲಿ ಕೊಳ್ಳಲೇಬೇಕಾದ ಅವಶ್ಯಕ ವಸ್ತುವಾಗಿದೆ.
ಕೆಲವರಿಗೆ ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನನ್ನ ದುಡಿಮೆಯಲ್ಲಿನ ಹಣವನ್ನು ವ್ಯಯಿಸಿ ಕ್ಯಾಲೆಂಡರ್ ವಿತರಿಸಲಾಗುತ್ತಿದೆ.
ಜನರ ಪ್ರೀತಿ, ವಿಶ್ವಾಸವನ್ನು ಕಾಪಾಡಿಕೊಳ್ಳುವುದೇ ಕ್ಯಾಲೆಂಡರ್ ವಿತರಣೆಯ ಉದ್ದೇಶ ಎಂದರು.
ನರೇಂದ್ರ ಗ್ರಾ.ಪಂ. ಅಧ್ಯಕ್ಷ ನಾಗೇಶ ಹಟ್ಟಿಹೊಳಿ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬಸವಪ್ರಭು ಹುಂಬೇರಿ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ,
ಎಪಿಎಂಸಿ ಮಾಜಿ ಅಧ್ಯಕ್ಷ ಚೆನ್ನವೀರಗೌಡ ಪಾಟೀಲ, ಮಳೆಪ್ಪಜ್ಜನ ಮಠದ ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಈಶ್ವರ ಗಾಣಿಗೇರ, ಭಾರತ ಸೇವಾದಳ ತಾಲೂಕು ಅಧ್ಯಕ್ಷ ಮಂಜುನಾಥ ತಿರ್ಲಾಪೂರ, ಕರೆಪ್ಪ ಬಳಿಗೇರ, ಸಿದ್ದಪ್ಪ ಜೈನರ್,
ಗೌರಪ್ಪ ಹುಂಬೇರಿ, ವಿರೂಪಾಕ್ಷ ಹೊಸಕೇರಿ, ಶಂಕ್ರಪ್ಪ ದುಬ್ಬನಮರಡಿ,
ಈರಪ್ಪ ತೇಗೂರ ಇತರರು ಈ ಸಂದರ್ಭದಲ್ಲಿದ್ದರು.