ಬೈಕ್ ಸವಾರನನ್ನ ರಕ್ಷಿಸಲು ಹೋಗಿ ಕಲ್ಲು ಗುಡ್ಡ ಏರಿದ ಸಾರಿಗೆ ಬಸ್
ರಾಯಚೂರು (ಜ.11): ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗುಡ್ಡದ ಹತ್ತಿರ ಬೈಕ್ ಸವಾರನನ್ನ ರಕ್ಷಿಸಲು ಮುಂದಾದ ಲಿಂಗಸುಗೂರು ಡಿಪೋಗೆ ಸೇರಿದ ರೂಟ್ ನಂಬರ್ 94-95ರ ಕೆಎ 36 ಎಫ್ 1425 ಸಂಖ್ಯೆಯ ಬಳ್ಳಾರಿ ಲಿಂಗಸುಗೂರು ಕಲಬುರಗಿ ಬಸ್, ರಸ್ತೆ ಬಿಟ್ಟು ಪಕ್ಕದ ಕಲ್ಲುಗುಡ್ಡವೇರಿದ ಘಟನೆ ಇಂದು ಸಂಜೆ 07ರ ಸಮಾರಿಗೆ ನಡೆದಿದೆ.
ಲಿಂಗಸುಗೂರು ಡಿಪೋಗೆ ಸೇರಿದ ಬಸ್ ಕಲಬುರಗಿ ಕಡೆಗೆ ಹೊರಟಿತ್ತು. ಗೋಲಪಲ್ಲಿ ಡೌನ್ ಬಳಿ ಬೈಕ್ ಸವಾರ ಏಕಾಏಕಿ ಬಸ್ಸಿನ ಮುಂದುಗಡೆ ಬಂದು ಬೈಕ್ ನಿಲ್ಲಿಸಿದ್ದಾನೆ. ಬೈಕ್ ಸವಾರನನ್ನ ರಕ್ಷಿಸುವ ದೃಷ್ಟಿಯಿಂದ ಬಸ್ ಸೈಡ್ ಗೆ ತೆಗೆದುಕೊಂಡಿರುವುದರಿಂದ ಈ ಘಟನೆ ನಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಗಳು ಆಗಿಲ್ಲ. ಯಾವುದೇ ಪ್ರಾಣಹಾನಿಯಾಗಿಲ್ಲ. ಬಸ್ ಕೂಡ ಸುರಕ್ಷಿತವಾಗಿ ನಿಂತುಕೊಂಡಿದ್ದು, ಟ್ರ್ಯಾಕ್ಟರ್ ಸಹಾಯದಿಂದ ಹೊರ ತೆಗೆಯಬಹುದು ಎಂದು ಪ್ರಯಾಣಿಕರು, ಚಾಲಕ ನಿರ್ವಾಹಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.