ಧಾರವಾಡ ಪ್ರಜಾಕಿರಣ.ಕಾಮ್ ಜು.18 : ಧಾರವಾಡದ ಮೃತ್ಯುಂಜಯ ಬಡಾವಣೆ ವಿದ್ಯಾ ನಗರ ವಾಸಿ ಬಸವರಾಜ ಬಸಾಪುರರವರು ಹುಬ್ಬಳ್ಳಿಯ ಪೃಥ್ವಿಬಿಲ್ಡರ್ಸ್ ಅಮರಗೋಳದಲ್ಲಿ ಅಭಿವೃದ್ಧಿಪಡಿಸುತ್ತಿರುವ ಲೇಔಟನಲ್ಲಿ ಪ್ಲಾಟ ನಂ.27ನ್ನು ರೂ.9,95,935/-ಗೆ ಖರೀದಿಸಿದ್ದರು.
ಆ ಪೈಕಿ ಅವರು ರೂ.5 ಲಕ್ಷ ಮುಂಗಡಕೊಟ್ಟು ದಿ:29/05/2015 ರಂದು ಖರೀದಿ ಕರಾರು ಒಪ್ಪಂದ ಮಾಡಿಕೊಂಡಿದ್ದರು.
ಆದರೆ ಸಾಕಷ್ಟು ಕಾಲಾವಕಾಶ ನೀಡಿದರೂ ಪ್ಲಾಟು ಅಭಿವೃದ್ಧಿ ಮಾಡಿರಲಿಲ್ಲ ಹಾಗೂ ದೂರುದಾರರ ಮುಂಗಡ ಹಣವನ್ನು ಸಹ ವಾಪಸ್ಸು ಕೊಟ್ಟಿರಲಿಲ್ಲ.
ಆದ್ದರಿಂದ ತನಗೆ ಎದುರುದಾರ/ಬಿಲ್ಡರವರಿಂದ ಸೇವಾ ನ್ಯೂನ್ಯತೆ ಆಗಿ ತೊಂದರೆಯಾಗಿದೆ ಅಂತಾ ಹೇಳಿ ದೂರುದಾರ ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ.ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ 2015ರಲ್ಲಿ ದೂರುದಾರನಿಂದ ರೂ.5 ಲಕ್ಷ ಹಣ ಪಡೆದುಕೊಂಡು ಎದುರುದಾರರು ಪ್ಲಾಟ ನಿರ್ಮಾಣ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
ದೂರುದಾರರು ಸಂದಾಯ ಮಾಡಿದ ರೂ.5 ಲಕ್ಷ ಮತ್ತು ಅದರ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಒಪ್ಪಂದವಾದ ದಿ:29/05/2015 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ತೀರ್ಪಿನಲ್ಲಿ ಆಯೋಗ ಹೇಳಿದೆ.