ಧಾರವಾಡ prajakiran.com : ಜನೋಪಕಾರಿ ಆಗದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯೆದ ಬಿಆರ್ಟಿಎಸ್ ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಕಳಪೆ ಕಾಮಗಾರಿ, ದುಂದು ವೆಚ್ಚದ ಬಗ್ಗೆ ಸರಕಾರ ನ್ಯಾಯಾಂಗ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್ ನೀರಲಕೇರಿ ಆಗ್ರಹಿಸಿದ್ದಾರೆ.
೨೦೧೨ ರಲ್ಲಿ ಮಂಜೂರಾದ ಬಿಆರ್ಟಿಎಸ್ ಯೋಜನೆಗೆ ಮೊದಲು ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಹಣ ವ್ಯಯಿಸಲಾಗಿದೆ. ಕಳೆದ ೮ ವರ್ಷಗಳಿಂದ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ.
ಯೋಜನೆಯು ಪೂರ್ಣಗೊಂಡು, ಜನರಿಗೆ ಅಸಮರ್ಪಕ ಸಾರಿಗೆ ಸೌಕರ್ಯ ಕೂಡ ಒದಗಿಸಲಾಗುತ್ತಿದೆ. ಇದು ಅವಳಿನಗರ ನಡುವೆ ಸಂಚರಿಸುವ ಜನರಿಗೆ ಅನುಕೂಲ ಆಗುವ ಬದಲಿಗೆ ಶಾಪವಾಗಿ ಕಾಡುತ್ತಿದೆ.
ಅಲ್ಲದೆ, ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಹಲವರು ಬಹಿರಂಗವಾಗಿಯೇ ಆರೋಪಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ನೀರು ಸಂಗ್ರಹ, ಮೇಲ್ಸೇತುವೆಯಲ್ಲಿ ಬಿರುಕು, ದೀಪಗಳ ಬಳಕೆ ಸ್ಥಗಿತ ಮುಂತಾದ ಸಮಸ್ಯೆಗಳು ಈಗ ಕಾಣಿಸುತ್ತಿವೆ. ಅಪಾರ ಪ್ರಮಾಣದ ಹಣ ವ್ಯಯಿಸಿದರೂ ಜನರಿಗೆ ಸಂಚಾರಕ್ಕೆ ಸೂಕ್ತ ಆಗಿಲ್ಲ.
ಇದಲ್ಲದೆ, ಬಿಆರ್ಟಿಎಸ್ನಲ್ಲಿ ಇಂದಿನವರೆಗೂ ಸಮಸ್ಯೆಗಳದ್ದೇ ದರಬಾರಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಹೊರಟಿರುವುದು ಜನತೆಗೆ ಮಾಡುವ ಮೋಸವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕಅರವಿಂದ ಬೆಲ್ಲದಅವರು ಈಗಲಾದರೂ ಯೋಜನೆಯ ಸತ್ಯಾಂಶವನ್ನು ಜನರ ಮುಂದಿಡಬೇಕು.
ಕಳಪೆ ಕಾಮಗಾರಿಯಿದ್ದರೂ ಬಿಆರ್ಟಿಎಸ್ ಗೆ ಪ್ರಶಸ್ತಿ ಲಭಿಸಿರುವುದು ದುರಂತದ ಸಂಗತಿ. ಅದನ್ನೇ ಮುಂದಿಟ್ಟುಕೊಂಡು ಯೋಜನೆಯ ವೈಫಲ್ಯವನ್ನು ಶೆಟ್ಟರ್ ಅವರು ಸಮರ್ಥಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕುಟುಕಿದ್ದಾರೆ.
ಜನರು ನಿತ್ಯ ಎದುರಿಸುತ್ತಿರುವ ತೊಂದರೆ ಹಾಗೂ ವಾಸ್ತವದ ಬಗ್ಗೆ ಅವಲೋಕನ ಮಾಡದೇ ಸಚಿವರು ಅನಾದರ ತೋರಿಸುತ್ತಿರುವುದನ್ನು ಪ್ರಶ್ನಿಸಬಾರದೇ? ಎಂದು ಸವಾಲು ಹಾಕಿದ್ದಾರೆ.
ಈ ವಿಷಯ ಕುರಿತು ಬಿಜೆಪಿ ಪದಾಧಿಕಾರಿಗಳು ತಮ್ಮ ನಾಯಕರನ್ನು ಬೆಂಬಲಿಸುವ ಭರದಲ್ಲಿ ಯೋಜನೆಯ ಬಾಧಕಗಳನ್ನು ಮುಚ್ಚಿಹಾಕಲು ಯತ್ನಿಸುವ ಮೂಲಕ ಅವಳಿನಗರದ ಜನತೆಯನ್ನು ದಿಕ್ಕುತಪಿಸುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ.
ಬಿಆರ್ಟಿಎಸ್ ಯೋಜನೆಯನ್ನು ಮೂಲ ನಕ್ಷೆಯಂತೆ ಮಾಡದ ಕಾರಣ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ.
ಯೋಜನೆಯ ಅನುಷ್ಠಾನದಿಂದ ಅಪಾರ ಪ್ರಮಾಣದ ಜನರ ತೆರಿಗೆ ಹಣ ಕುರಿತು ನ್ಯಾಯಾಂಗ ತನಿಖೆ ನಡೆಸಲು ಸರಕಾರ ತೀರ್ಮಾನಿಸಲಿ.
ಆಗ ನಿಜಾಂಶ ಜನರ ಮುಂದೆ ಬರಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ತನಿಖೆಗೊಳಪಡಿಸುವ ಎದೆಗಾರಿಕೆ ತೋರಿಸಲಿ ಎಂದು ಪಿ.ಎಚ್. ನೀರಲಕೇರಿ ಒತ್ತಾಯಿಸಿದ್ದಾರೆ.