ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಜನುಮದಿನದ ಪ್ರಯುಕ್ತ 52 ಗೆಳೆಯರಿಂದ ರಕ್ತದಾನ
ಡಿಮಾನ್ಸ್, ಜಿಲ್ಲಾಸ್ಪತ್ರೆ ಹಾಗೂ ಆಶ್ರಮ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ
ಧಾರವಾಡ : ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ 46ನೇ ಜನುಮದಿನದ ಪ್ರಯುಕ್ತ
ಮಂಗಳವಾರ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ಬಳಿ ಜನಜಾಗೃತಿ ಸಂಘ, ಬಾಲನಂದನ ಟ್ರಸ್ಟ್ ಹಾಗೂ ಬಸವರಾಜ ಕೊರವರ ಗೆಳೆಯರು ಹಾಗೂ ಅಭಿಮಾನಿಗಳ ಬಳಗದ ವತಿಯಿಂದ 52 ಗೆಳೆಯರು ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.
ಇದರಲ್ಲಿ 10 ಬಾಟಲ್ ಜಿಲ್ಲಾಸ್ಪತ್ರೆಯ ರಕ್ತ ಭಂಡಾರಕ್ಕೆ ಹಾಗೂ ಇನ್ನುಳಿದ 42 ಬಾಟಲ್ ರಕ್ತ ನವನಗರದ ಪದ್ಮಶ್ರೀ ಡಾ. ಬಿ. ಆರ್. ಪಾಟೀಲ ಕ್ಯಾನ್ಸರ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.
ಇದಲ್ಲದೆ, ಡಿಮಾನ್ಸ್ ನ 50 ಒಳರೋಗಿಗಳಿಗೆ, ಜಿಲ್ಲಾಸ್ಪತ್ರೆಯ 150 ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳಿಗೆ ಮತ್ತು ಸೈದಾಪುರದ ಡಾ. ಬಿ. ಆರ್. ಅಂಬೇಡ್ಕರ್ ವಸತಿಯುತ ಆಶ್ರಮ ಶಾಲೆಯ 95 ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಇದಕ್ಕೂ ಮುನ್ನ ನಡೆದ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದ ಪದ್ಮಶ್ರೀ ಡಾ. ಬಿ.ಆರ್. ಪಾಟೀಲ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ. ಉಮೇಶ ಹಳ್ಳಿಕೇರಿ, ಇತ್ತೀಚೆಗೆ ರಕ್ತದ ಕೊರತೆ ಬಹಳ ಹೆಚ್ಚಾಗುತ್ತಿದೆ. ಅದನ್ನು ಅರಿತು ಬಸವರಾಜ ಕೊರವರ ಗೆಳೆಯರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ ಮಾತನಾಡಿ, ಅನೇಕರು ಜನುಮದಿನದ ಹೆಸರಿನಲ್ಲಿ ಅನಗತ್ಯವಾಗಿ ಹಣ ಪೋಲು ಮಾಡಿ ಮೋಜು ಮಸ್ತಿ ಮಾಡುವ ಇಂದಿನ ದಿನಗಳಲ್ಲಿ ಬಸವರಾಜ ಕೊರವರ ಗೆಳೆಯರು ಮತ್ತೊಬ್ಬರ ಪ್ರಾಣ ಉಳಿಸುವ ಇಂತಹ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದಿದ್ದಾರೆ.
ವೈದ್ಯರು ಹಾಗೂ ಅನೇಕ ರೋಗಿಗಳ ಸಂಬಂಧಿಕರು ಒಂದು ಬಾಟಲ್ ರಕ್ತಕ್ಕಾಗಿ ಹಲವು ಗಂಟೆಗಳ ಕಾಲ ಪರದಾಡುವ ಸ್ಥಿತಿಯನ್ನು ಕಣ್ಣಾರೆ ಕಂಡು ತಮ್ಮ ಗೆಳೆಯನ ಜನುಮ ದಿನ ಅವಿಸ್ಮರಣೀಯವಾಗಿಸಲು ರಕ್ತ ನೀಡಿ ಸಾಮಾಜಿಕ ಬದ್ದತೆ ತೋರಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಬಸವರಾಜ ಕೊರವರ ಈಗಾಗಲೇ
ಬಡವರ ಧ್ವನಿಯಾಗಿ, ನೊಂದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದಾರೆ.
ಅವರ ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂದು ಧುಭ ಹಾರೈಸಿದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, ಪ್ರತಿವರ್ಷ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಹತ್ತು ಹಲವು ವಿಭಿನ್ನ ರೀತಿಯ ಕಾರ್ಯಕ್ರಮ ಸಂಘಟಿಸುವ ಗೆಳೆಯರು ಈ ಬಾರಿ
ರಕ್ತದಾನ ಶಿಬಿರ ಮಾಡಿ ಜನುಮ ದಿನಕ್ಕೆ ಮೆರಗು ತಂದಿದ್ದಾರೆ. 52 ಯುವಕರು ಸ್ವಯಂ ಸ್ಪೂರ್ತಿಯಿಂದ ರಕ್ತದಾನ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ರಾಘವೇಂದ್ರ ಶೆಟ್ಟಿ, ಸುಮಂಗಲಾ ಕೊರವರ, ಜಯಶ್ರೀ ನಾಯಕವಾಡ ಪವಾರ, ಈರಣ್ಣ ಅಗಳಗಟ್ಟಿ, ಬಸವಣ್ಣೆಪ್ಪ ಕಮತಿ, ಕಲಾವಿದ ಮಂಜುನಾಥ ಹಿರೇಮಠ, ಆನಂದ ಪಾಟೀಲ, ಮಲ್ಲೇಶ ಅಂಬಿಗೇರ, ಈರಣ್ಣ ಹೂಗಾರ, ಶಶಿ ಮುಂದಿನಮನಿ, ಅಖಿಲ್ ಬೆಣ್ಣಿ, ಸುರೇಶ .ಕೆ, ಶಿವಕುಮಾರ ದೇವರಮನಿ,
ಅಯ್ಯನಗೌಡ ಬಿರಾದಾರ, ತಮ್ಮನಗೌಡ, ಶರಣ್ ಗದ್ದಿ,
ಅಯ್ಯಣ್ಣ ಹೂಗಾರ, ರಾಜೇಶ ಶೆಟ್ಟಿ,
ಸೈಯದ್ ಮುರ್ತಾಜ್
ಸೇರಿದಂತೆ ಜನಜಾಗೃತಿ ಸಂಘದ ಸದಸ್ಯರು, ಬಸವರಾಜ ಕೊರವರ ಅಭಿಮಾನಿ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.