ಬೆಳಗಾವಿ prajakiran.com : ಬೆಳಗಾವಿಯ ಗಡಿ ಹೋರಾಟದ ಹಿರಿಯ ಕೊಂಡಿ ಹಾಗೂ ಪ್ರಥಮ ಕನ್ನಡ ಮಹಾಪೌರ ಸಿದ್ದನಗೌಡ ಪಾಟೀಲ ಬುಧವಾರ ತಮ್ಮ 87 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಳಗಾವಿಯ ಶಿವಬಸವನಗರದ ತಮ್ಮ ನಿವಾಸದಲ್ಲಿ ಮಧ್ಯಾಹ್ನ 12 ಗಂಟೆಗೆ ನಿಧನ ಹೊಂದಿದರು. ಬುಧವಾರ ಮಧ್ಯಾಹ್ನ 3 ಗಂಟೆಗೆ ಅವರ ಸ್ವಗ್ರಾಮ ನೇಸರಗಿ ಬಳಿಯ ಮಲ್ಲಾಪೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.
ಇದರಿಂದಾಗಿ ಬೆಳಗಾವಿಯ ಕನ್ನಡ ಪರ ಹೋರಾಟಕ್ಕೆ ತುಂಬಲಾರದ ಹಾನಿಯುಂಟಾಗಿದೆ ಎಂದು ಕನ್ನಡ ಪರ ಸಂಘಟನೆ ಅಶೋಕ ಚಂದರಗಿ, ರಾಘವೇಂದ್ರ ಜೋಶಿ ಸೇರಿದಂತೆ ಅನೇಕ ಕನ್ನಡ ಸಂಘಟನೆಗಳು ಕಂಬನಿ ಮಿಡಿದಿವೆ.
ಸಿದ್ದನಗೌಡ ಪಾಟೀಲರು 1956 ರಿಂದಲೂ ಕನ್ನಡ ಹೋರಾಟದ ಮುಂಚೂಣಿಯಲ್ಲಿದ್ದರು. 1984 ರಲ್ಲಿ ಬೆಳಗಾವಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದ ಅವರು 1990 ರಲ್ಲಿ ಮತ್ತೆ ಪುನರಾಯ್ಕೆಗೊಂಡರು.
1991 ರಲ್ಲಿ ಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡಿದ್ದರು.ಅಲ್ಲದೆ, ಬೆಳಗಾವಿ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾಗಿ ಮೂರು ಅವಧಿಗಳವರೆಗೆ ಸೇವೆ ಸಲ್ಲಿಸಿದ್ದರು.
ಕರ್ನಾಟಕ ಗ್ರಾಹಕರ ಮಹಾಮಂಡಳಿಯ ನಿರ್ದೇಶಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದರು.ಎರಡೂವರೆ ವರ್ಷಗಳ ಕಾಲ ಮಹಾಮಂಡಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.