ಧಾರವಾಡ prajakiran.com : ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರೆ ನೀಡಲಾಗಿರುವ ಭಾರತ ಬಂದ್ ಗೆ ಧಾರವಾಡ ಜಿಲ್ಲೆಯ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.
ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿ.8 ರಂದು ರೈತ ಸಂಘ ಕರೆ ನೀಡಿರುವ ಭಾರತ ಬಂದ್ ಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಬೆಂಬಲ ಸೂಚಿಸಿದೆ.
ಸೋಮವಾರ ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕಾರ್ಪೋರೇಟ್ ಪರ ಕಾಯ್ದೆಗಳನ್ನು ಮತ್ತು ವಿದ್ಯುತ್ ಮಸೂದೆಯನ್ನು ಹಿಂಪಡೆಯಬೇಕೆಂಬ ಬೇಡಿಕೆಯನ್ನು ಮುಂದಿಟ್ಟು , ದೆಹಲಿಯಲ್ಲಿ ಶಾಂತಿಯುತ ಹೋರಾಟ ನಡೆಸುತ್ತಿರುವ ರೈತರ ಮೇಲೆ ಹಲ್ಲೆ ಮಾಡಿಸಿದ ಕೇಂದ್ರ ಸರ್ಕಾರದ ನಡೆಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ದೇಶದ ರೈತರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಭಾರತ ಬಂದ್ ಗೆ ಸ್ವಯಂ ಪ್ರೇರಿತರಾಗಿ ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಮನವಿ ಮಾಡಿಕೊಂಡರು.
ಧಾರವಾಡ ಜಿಲ್ಲೆಯಲ್ಲಿ ಬಂದ್ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ.
ಈ ಸ್ವಯಂಪ್ರೇರಿತ ಬಂದ್ ಗೆ
ದಲಿತ ಸಂಘರ್ಷ ಸಮಿತಿಗಳು ,ಆಟೋ ಚಾಲಕರ ಸಂಘ, ಕಾರ್ಮಿಕ ಸಂಘಟನೆಗಳು, ಲಿಡ್ಕರ್ ಸಂಘಟನೆಗಳು, ಸೇರಿದಂತೆ ಇನ್ನೂ ಮುಂತಾದ ಜನಪರ ಸಂಘಟನೆಗಳು ಭಾಗವಹಿಸುತ್ತವೆ ಎಂದು ತಿಳಿಸಿದರು.
ದಲಾಲ್ ವರ್ತಕರ ಸಂಘದ ಬೆಂಬಲ ; ಭಾರತ ಬಂದ್ ಗೆ ಧಾರವಾಡ ಜಿಲ್ಲೆಯ ದಲಾಲ್ ಹಾಗೂ ವರ್ತಕರ ಸಂಘ ಬೆಂಬಲ ಸೂಚಿಸಲಿದೆ ಎಂದುಧಾರವಾಡ ದಲಾಲ್ ಹಾಗೂ ವರ್ತಕರ ಸಂಘಟನೆ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಪ್ರಜಾಕಿರಣ. ಕಾಮ್ ಗೆ ತಿಳಿಸಿದರು.
ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಸರ್ಕಾರ ಹೈದ್ರಾಬಾದ್ ಚುನಾವಣಾ ಪ್ರಚಾರದಲ್ಲಿ ನಿರತವಾಗಿದೆ. ಅವರಿಗೆ ರೈತರ ಸಂಕಷ್ಟ ಅರಿತುಕೊಳ್ಳಲು ಸಮಯವಿಲ್ಲ ಎಂದು ಕಿಡಿಕಾರಿದರು.