ಧಾರವಾಡ ಪ್ರಜಾಕಿರಣ.ಕಾಮ್ : ತಾಲೂಕಿನ ಹೆಬ್ಬಳ್ಳಿ ಗ್ರಾಮದ ಬಿದ್ದ ಮನೆಯಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದರೂ ಘಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸದ ಧಾರವಾಡ ತಹಶೀಲ್ದಾರ ಸಂತೋಷ ಹಿರೇಮಠ ಅವರ ಕ್ರಮ ಖಂಡಿಸಿ ಹೆಬ್ಬಳ್ಳಿ ಗ್ರಾಮದಲ್ಲಿ ಮನೆ ಸಂತ್ರಸ್ತರ ಹೋರಾಟ ಎರಡನೇ ದಿನಕ್ಕೆ ಮುಂದುವರೆದಿದೆ.
ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸ್ವತಃ ಆಗಮಿಸಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಈ ಹಿಂದೆ ಎರಡು ಬಾರಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಕಚೇರಿ ಎದರು
ಪ್ರತಿಭಟನೆ ಮಾಡಿದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ಹೀಗಾಗಿ ಶುಕ್ರವಾರ ರೈತ ದಿನಾಚರಣೆ ಹಿನ್ನೆಲೆಯಲ್ಲಿ ಬಂಡ ಬಿಜೆಪಿ ಸರಕಾರದ ವಿರುದ್ದ ಭಜನೆ ಹಚ್ಚಿ ವಿನೂತನ ಪ್ರತಿಭಟನೆ ನಡೆಸಿ, ತಮ್ಮ ಬೇಸರ ವ್ಯಕ್ತಪಡಿಸಿದರು.
ಧಾರವಾಡದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ.
ಉಪತಹಸೀಲ್ದಾರ್ ಕಳುಹಿಸಿ ಕೈ ತೊಳೆದುಕೊಂಡ ತಹಶೀಲ್ದಾರ ವಿರುದ್ಧ ಗ್ರಾಮಸ್ಥರು
ಅಸಮಾಧಾನ ವ್ಯಕ್ತಪಡಿಸಿದರು.
ಮನೆ ಕಳೆದುಕೊಂಡು ಬೀದಿಪಾಲಾದರೂ ಕರಗದ ಭ್ರಷ್ಟ ವ್ಯವಸ್ಥೆ ವಿರುದ್ದ ಕಿಡಿಕಾರಿ ಅಧಿಕಾರಿಗಳ ತರಾಟೆ ತೆಗೆದುಕೊಂಡ ಸೂರು ಕಳೆದುಕೊಂಡ ಸಂತ್ರಸ್ತ್ರ ಮಹಿಳೆಯರ ನಡೆಯಿಂದ ಕಂಗಾಲಾದ ಅಧಿಕಾರಿ ವರ್ಗದವರು ತಹಶೀಲ್ದಾರ ಅವರಿಗೆ ಮಾಹಿತಿ ನೀಡುವುದಾಗಿ ಸ್ಥಳದಿಂದ ತೆರಳಿದರು.