ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದ ಐವರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯನ್ನು ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ವಿಶೇಷ ಸಿಬಿಐ ನ್ಯಾಯಾಲಯ ವಜಾಗೊಳಿಸಿದೆ.
ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗಂಗಾಧರ ಸಿ.ಎಂ. ಅವರು ಈ ಮಹತ್ವದ ಆದೇಶ ಹೊರಡಿಸಿದರು.
ಐವರು ಆರೋಪಿಗಳಾದ ಅಶ್ವಥ್ ಎಸ್, ನಜೀರ್ ಅಹ್ಮದ್, ಶಹಾನವಾಜ್ , ನೂತನ್ ಕೆ.ಎಸ್, ಹರ್ಷಿತ್ ಅವರ ಪರ ಇಬ್ಬರು ವಕೀಲರು ಪ್ರತ್ಯೇಕವಾಗಿ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅರ್ಜಿಯ ಕುರಿತು ಸಿಬಿಐ ಅಧಿಕಾರಿಗಳ ಪರ ವಕೀಲರು ಹಾಗೂ ಆರೋಪಿಗಳ ಪರ ವಕೀಲರು ಮಂಡಿಸಿದ ವಾದ-ಪ್ರತಿವಾದವನ್ನು ಕುಲೂಂಕುಶವಾಗಿ ಆಲಿಸಿದ ಬಳಿಕ ನ್ಯಾಯಾಲಯ ಈ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
2016 ಜೂನ್ ಹದಿನೈದರಂದು ಬೆಳ್ಳಂ ಬೆಳಗ್ಗೆ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಅವರನ್ನು ಸಪ್ತಾಪುರದ ಉದಯ್ ಜಿಮ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಈ ಪ್ರಕರಣದ ಕುರಿತು ಸಿಬಿಐ ತನಿಖೆ ಇನ್ನೂ ಮುಂದುವರೆದಿದ್ದು, ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ, ಅವರ ಸೋದರ ಮಾವ ಚಂದೂ ಮಾಮ ಅಲಿಯಾಸ್ ಚಂದ್ರಶೇಖರ ಇಂಡಿಯನ್ನು ಬಂಧಿಸಿರುವ ಅವರು, ಇನ್ಯಾರನ್ನು ಬಂಧಿಸಲಿದ್ದಾರೆ. ಮತ್ಯಾರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬುದು ಕಾದು ನೋಡಬೇಕು.