ಲಕ್ನೋ (ಉತ್ತರಪ್ರದೇಶ) prajakiran.com : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನಾಯಕರು ಸೇರಿ 32 ಆರೋಪಿಗಳು ನಿರ್ದೋಷಿಗಳು ಎಂದು ಲಕ್ನೋ ವಿಶೇಷ ಸಿಬಿಐ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
2 ಸಾವಿರ ಪುಟಗಳ ತೀರ್ಪು ಪ್ರಕಟಿಸಿದ ಲಕ್ನೋ ವಿಶೇಷ ಸಿಬಿಐ ಕೋರ್ಟ್ ಮಸೀದಿ ಧ್ವಂಸ ಪೂರ್ವ ನಿಯೋಜಿತವಲ್ಲ. ಆರೋಪಿಗಳ ವಿರುದ್ದ ಪ್ರಬಲ ಸಾಕ್ಷ್ಯವಿಲ್ಲ. ಅಲ್ಲದೆ ಒಳಸಂಚು ರೂಪಿಸಿರುವುದಕ್ಕೆ ಯಾವುದೇ ವೀಡಿಯೋ ಹಾಗೂ ಪೋಟೋ ಸಾಕ್ಷ್ಯ ಸ್ವೀಕಾರಅರ್ಹವಲ್ಲ ಎಂದು ಹೇಳಿದೆ.
ಬಿಜೆಪಿಯ ನಾಯಕರಾದ ಲಾಲ್ ಕೃಷ್ಣಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಂಸದ ಸಾಕ್ಷ್ಯಿ ಮಹಾರಾಜ್ ಸೇರಿ ಎಲ್ಲರನ್ನು ಖುಲಾಸೆಗೊಳಿಸಿದೆ.
ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದ ಕಳೆದ ವರ್ಷ ಶಾಂತಿಯುತ ಅಂತ್ಯ ಕಂಡಿರುವ ಬೆನ್ನಲ್ಲೇ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಬುಧವಾರ (ಸೆ.30) ಹೊರಬಿದ್ದಿದ್ದು, ನ್ಯಾಯಾಲಯ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ.
28 ವರ್ಷಗಳ ಬಳಿಕ ಲಖನೌದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು 2000 ಪುಟಗಳ ತೀರ್ಪು ಓದಿದರು. ಈ ವೇಳೆ ಕೋರ್ಟ್ ಹಾಲ್ನಲ್ಲಿ ವಕೀಲರು ಮತ್ತು 26 ಮಂದಿ ಆರೋಪಿಗಳನ್ನು ಬಿಟ್ಟು ಬೇರೆ ಯಾರಿಗೂ ಅವಕಾಶ ನೀಡಿರಲಿಲ್ಲ.
ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ, ಸಾಕ್ಷಿ ಮಹಾರಾಜ್ ಸೇರಿದಂತೆ 32 ಮಂದಿ ಹಾಜರು ಇರುವಂತೆ ಕೋರ್ಟ್ ಸೆ.16ರಂದು ಸೂಚನೆ ನೀಡಿತ್ತು.
ಆದರೆ ಉಮಾಭಾರತಿ ಅವರು ಕರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋರ್ಟ್ನಿಂದ ವಿನಾಯಿತಿ ಕೋರಿದ್ದರು.
ಆರೋಪಿ ಪಟ್ಟಿಯಲ್ಲಿರುವ ಇತರ ಮುಖಂಡರಾದ ಸಾಧ್ವಿ ರಿತಂಬರ್, ಸಾಕ್ಷಿ ಮಹಾರಾಜ್ ಮತ್ತು ಚಂಪತ್ ರಾಯ್ ಬನ್ಸಾಲ್ ಸೇರಿದಂತೆ 26 ಮಂದಿ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದರು.
ಪ್ರಕರಣ ಸಂಬಂಧ ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ಒಟ್ಟು 48 ಜನರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದ್ದು, ಅದರಲ್ಲಿ 17 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಸ್ಥಾಪಿಸಲಾಗಿರುವ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಬಿಜೆಪಿ ಮುಖಂಡ ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ ಕೂಡ ಈ ಪ್ರಕರಣದ ಆರೋಪಿಗಳು.
ಆರೋಪ ಏನು?
ಅಯೋಧ್ಯೆ ರಾಮ ಜನ್ಮಭೂಮಿ ಪರಿಸರದಲ್ಲಿ 15ನೇ ಶತಮಾನದಲ್ಲಿ ನಿರ್ವಿುಸಲಾಗಿದ್ದ ಬಾಬ್ರಿ ಕಟ್ಟಡವನ್ನು 1992 ಡಿಸೆಂಬರ್ 6ರಂದು ಕೆಡವಲಾಗಿತ್ತು.
ಆಡ್ವಾಣಿ, ಜೋಷಿ, ಉಮಾ ಭಾರತಿ ಇನ್ನಿತರ ಬಿಜೆಪಿ ನಾಯಕರು ಇದರ ಸಂಚು ರೂಪಿಸಿದ್ದರು ಎಂಬುದು ಆರೋಪ.
ಈ ಘಟನೆ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಅವರ ಸರ್ಕಾರ ಪರೋಕ್ಷವಾಗಿ ನೆರವು ನೀಡಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.
ಇದನ್ನು ಸ್ವಾಗತಿಸಿ ಧಾರವಾಡದ ಬಿಜೆಪಿ ಕಾರ್ಯಕರ್ತರು ಕಚೇರಿ ಎದುರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.