ಕೇವಲ 10 ದಿನದಲ್ಲಿ ಪರೀಕ್ಷೆ ಸಂಕಷ್ಟ
ಧಾರವಾಡ prajakiran.com : ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಿ ಎಡ್ ವಿದ್ಯಾರ್ಥಿಗಳ ಜೊತೆಗೆ ವಿಶ್ವವಿದ್ಯಾಲಯ ಚೆಲ್ಲಾಟವಾಡಲು ಹೊರಟಿದೆ.
ಈವರೆಗೆ ಕೇವಲ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಗೆ ಪರೀಕ್ಷೆ ಎಂದಿದ್ದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಅವರ ಆದೇಶವನ್ನು ಕೂಡ ಇಲ್ಲಿ ಗಾಳಿಗೆ ತೂರಲಾಗಿದೆ.
ಕೇವಲ 10 ದಿನಗಳ ಅವಕಾಶ ನೀಡಿ ಬಿ ಎಡ್ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಕೊನೆ ಕ್ಷಣದಲ್ಲಿ ಸಜ್ಜಾಗಿರುವುದು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಬಿ ಎಡ್ ಕಾಲೇಜಿಗಳ ಸಾವಿರಾರು ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ಪರೀಕ್ಷೆ ನಡೆಸುವುದಾದರೆ ಕನಿಷ್ಟ ಒಂದು ತಿಂಗಳ ಅವಕಾಶ ನೀಡಲಿ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಅದು ಬಿಟ್ಟು ಈವರೆಗೆ ಪರೀಕ್ಷೆ ಇಲ್ಲ ಎಂದು ಹೇಳಿದ್ದ ಸರಕಾರ ಈಗ ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವುದು ಏಕೆ.
ಸೆ. 11ರಿಂದ 19ರವರೆಗೆ ಮಧ್ಯದಲ್ಲಿ ಸಮಯಾವಕಾಶ ನೀಡದರೆ ನಿರಂತರವಾಗಿ 5 ವಿಷಯಗಳ ಕುರಿತು ಪರೀಕ್ಷೆ ಹಮ್ಮಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಇದನ್ನು ಖಂಡಿಸಿ ಈಗಾಗಲೇ ಕೆಲವು ಬಿ ಎಡ್ ವಿದ್ಯಾರ್ಥಿಗಳು ಪರೀಕ್ಷೆ ರದ್ದು ಪಡಿಸುವಂತೆ ಆಗ್ರಹಿಸಿ ಮಂಗಳವಾರ ಮಿಂಚಿನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಬಿಸಿ ತಾಕುತ್ತಿದ್ದಂತೆ ಎಚ್ಚೆತ್ತ ಕವಿವಿ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರು ಸೆ. 5 ರ ಶನಿವಾರ ದಂದು ಮತ್ತೊಂದು ಸುತ್ತಿನ ಸಭೆಯನ್ನು ಕರೆದು ನಿರ್ಧರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಹೀಗಾಗಿ ಸೆ. 5ರಂದು ಶನಿವಾರ ಮತ್ತೋಮ್ಮೆ ಬಿ ಎಡ್ ವಿದ್ಯಾರ್ಥಿಗಳು ಕವಿವಿ ಗೆ ತೆರಳಿ ಪರೀಕ್ಷೆಗಳನ್ನ ರದ್ದುಪಡಿಸಲು ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರನ್ನ ಒತ್ತಾಯಿಸಲು ನಿರ್ಧರಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಈಗಲಾದರೂ ಎಚ್ಚೆತ್ತುಕೊಂಡು ತನ್ನ ಪ್ರಮಾದ ಸರಿಪಡಿಸಿಕೊಳ್ಳುತ್ತಾ ಅಥವಾ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟ ಮುಂದುವರೆಸುತ್ತಾ ಕಾದು ನೋಡಬೇಕಿದೆ.