ಯಾದಗಿರಿ prajakiran.com : ಹಾಡಹಗಲೇ ಜಿಲ್ಲಾ ಪಂಚಾಯತ ವಿಪಕ್ಷ ನಾಯಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ನಗರದ ಎಸ್.ಪಿ. ಕಚೇರಿ ಸಮೀಪ ಚಿತ್ತಾಪುರ ರಸ್ತೆಯಲ್ಲಿ ಈ ರ್ದುಘಟನೆ ನಡೆದಿದ್ದು, ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಬಿಜೆಪಿ ಮುಖಂಡ, ಜಿಪಂ ಸದಸ್ಯ ಹಾಗೂ ಶಾಸಕ ರಾಜುಗೌಡ ಆಪ್ತನಾಗಿದ್ದ ಮರಿಲಿಂಗಪ್ಪ ಕರ್ನಾಳ ಎಂಬುವರೇ ಹಲ್ಲೆಗೊಳಗಾಗಿದ್ದಾರೆ.
ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಲ್ಲಲು ಯತ್ನಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಚೀರಾಡುತ್ತಾ ಸಾರ್ವಜನಿಕರೆಡೆಗೆ ಓಡುತ್ತಿದ್ದಂತೆ ದುಷ್ಕರ್ಮಿಗಳು ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ನಗರದ ಜನರು ಆತಂಕಗೊಂಡಿದ್ದು, ಹಲ್ಲೆಗೊಳಗಾದ ಮರಿಲಿಂಗಪ್ಪ ರಕ್ತಸಿಕ್ತ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಷಯ ಪೊಲೀಸರಿಗೆ ತಿಳಿದು, ಸ್ಥಳಕ್ಕೆ ಧಾವಿಸಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಸಾಗಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪರಾಧಿಗಳ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ.
ರಾಘವೇಂದ್ರ ಮಾಸ್ತರ
ಯಾದಗಿರಿ