ಅಕ್ರಮ ಮಣ್ಣು ಸಾಗಾಟ ಪ್ರಶ್ನಿಸಿದ್ದಕ್ಕೆ ಹಲ್ಲೆ
*ನಿಗದಿ ಜಿ.ಪಂ.ಮಾಜಿ ಸದಸ್ಯ ಘಾಟೀನ ಸಹಚರರ ಮೇಲೆ ದೂರು*
ಧಾರವಾಡ ಪ್ರಜಾಕಿರಣ.ಕಾಮ್ : ಮುರಕಟ್ಟಿ ಗ್ರಾಮದ ಸರ್ವೆ ನಂ. ೪೨ರ ಬ ಕರಾಬ ಜಮೀನಿನಲ್ಲಿ ಯಾವುದೇ ಪರವಾನಿಗೆ ಇಲ್ಲದ ಯಂತ್ರೋಪಕರಣಗಳನ್ನು ಬಳಸಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ಯುವಕರ ಮೇಲೆ ಜಿ.ಪಂ.ಮಾಜಿ ಸದಸ್ಯ ನಿಂಗಪ್ಪ ಘಾಟೀನ ಹಿಂಬಾಲಕರು ಹಲ್ಲೆ ನಡೆಸಿದ್ದಾರೆಂದು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡಿಹಾಳ ಗ್ರಾಮದ ಮಹೇಶ ಯಲ್ಲಪ್ಪ ದೊಡಮನಿ ಉರ್ಫ ಮಾದರ ಎಂಬಾತನೆ ಶುಕ್ರವಾರ ಧಾರವಾಡ ಗಾಮೀಣ ಪೊಲೀಸ್ ಠಾಣೆಯಲ್ಲಿ ನಿಂಗಪ್ಪ ಘಾಟೀನ ಸೇರಿದಂತೆ ೬ ಜನರ ವಿರುದ್ಧ ದೂರು ದಾಖಲಿಸಿದ್ದಾನೆ.
ತಮ್ಮ ಚಿಕ್ಕಪ್ಪನಾದ ಮಂಜುನಾಥ ಆರ್. ಹೊಸಮನಿ ದೂರವಾಣಿ ಮೂಲಕ ತಿಳಿಸಿದಾಗ ಸ್ನೇಹಿತ ಲೋಕೂರ ಗ್ರಾಮದ ಫಕ್ಕೀರಪ್ಪ ಪುಂಡಲೀಕ ಮಾದರ ಜತೆ ಬೈಕ್ನಲ್ಲಿ ಜಾಗಕ್ಕೆ ಭೇಟಿ ನೀಡಿದಾಗ ಅಲ್ಲಿ ಮಣ್ಣನ್ನು ಟಿಪ್ಪರ್ಗಳಿಗೆ ತುಂಬಿಸುತ್ತಿದ್ದುದನ್ನು ಪೋಟೋ ಮತ್ತು ವಿಡಿಯೋ ಮಾಡಿದಾಗ ಘಾಟೀನ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲನ್ನು ಬೀಸಿ ಹೊಡೆಯಲು ಮುಂದಾದಾಗ ತಪ್ಪಿಸಿಕೊಂಡಿದ್ದು ಆಗ ಸದ್ದಾಮ್, ಸುರೇಶಗೌಡ ಪಾಟೀಲ ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದದಿಂದ ಬೈದರೆ ಅರ್ಜುನ ಮಹದೇವಪ್ಪ ಘಾಟೀನ ಫಕ್ಕಿರಪ್ಪನಿಗೆ ಒದ್ದಿದ್ದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮುರಕಟ್ಟಿ ಗುಡ್ಡ ಕರಗಿ ಕೆಲವರು ಜೇಬು ತುಂಬಿಸಿಕೊಳ್ಳುತ್ತಿದ್ದು, ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದರೂ ವ್ಯರ್ಥವಾಗಿದೆ ಎಂದು ಹಲ್ಲೇಗೊಳಗಾದವರು ಹೇಳಿದ್ದು ಗಾಯಗೊಂಡ ಈ ಇಬ್ಬರೂ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.