ಹದಿನೈದು ದಿನಗಳ ಗಡುವು ನೀಡಿದ ವರ್ತಕರು
ಧಾರವಾಡ prajakiran.com : ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಧಾರವಾಡ ಎಪಿಎಂಸಿ ಮಾರುಕಟ್ಟೆ ದಲಾಲ್ ವರ್ತಕರು ಕರೆ ನೀಡಿದ್ದ ಅನಿರ್ದಿಷ್ಟ ಅವಧಿ ಬಂದ್ ತಾತ್ಕಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಧಾರವಾಡ ದಲಾಲ್ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ.
ಅವರು ಬುಧವಾರ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ನ ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ನಡೆದ ನಿರ್ಣಯದಂತೆ ಹೋರಾಟ ಹಿಂದಕ್ಕೆ ಪಡೆಯಲಾಗಿದೆ ಎಂದರು.
ಶಂಕರಣ್ಣ ಮುನವಳ್ಳಿ ಅವರು ಎಪಿಎಂಸಿ ನಿರ್ದೇಶಕ ಜೊತೆಗೆ ಪೋನ್ ನಲ್ಲಿ ಮಾತನಾಡಿ, ಕೇಂದ್ರ ಸರಕಾರದ ಒಂದು ದೇಶ ಒಂದು ಕಾಯ್ದೆಯನ್ನು ರಾಜ್ಯದಲ್ಲಿ ಕೂಡ ಜಾರಿ ಮಾಡಬೇಕು ಎಂದು ಮಾತುಕತೆ ನಡೆಸಿದರು.
ಅದರಂತೆ ನಿರ್ದೇಶಕರು ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ತಾತ್ಕಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ.
ಒಂದು ವೇಳೆ ಅಗಸ್ಟ್ 15ರ ಒಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮತ್ತೇ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಲಾಲ್ ವರ್ತಕರಿಗೆ ವಿಧಿಸಿರುವ 35 ಪೈಸೆ ಸೆಸ್ ರದ್ದುಪಡಿಸುವುದು, ಸೆಕ್ಷನ್ 35 ಎ ಮತ್ತು ಬಿ ರದ್ದು ಹಾಗೂ ಪರ್ವಿಟ್ ರದ್ದುಗೊಳಿಸಬೇಕು ಎಂದು ತಿಳಿಸಿದ್ದಾರೆ.
ಸರಕಾರ ಎಲ್ಲರಿಗೂ ಏಕರೂಪ ಕಾಯ್ದೆ ಜಾರಿಯಾಗುವಂತೆ ನೋಡಿಕೊಳ್ಳಬೇಕು.ಅದು ಬಿಟ್ಟು ಎಪಿಎಂಸಿ ಒಳಗಡೆ ಒಂದು ಕಾಯ್ದೆ ಹೊರಗಗಡೆ ಒಂದು ಕಾಯ್ದೆ ಇರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.
ಹೊರಗಡೆ ರೈತರಿಂದ ಕಾಳು ಕಡಿ ಖರೀದಿಸುವ ವರ್ತಕರನ್ನು ಕೂಡ ಎಪಿಎಂಸಿ ಕಾಯ್ದೆ ವ್ಯಾಪ್ತಿಗೆ ತರಬೇಕು. ಇಲ್ಲದಿದ್ದರೆ ಇದರಿಂದ ರೈತರಿಗೆ ನಷ್ಟವಾಗುತ್ತದೆ. ಜೊತೆಗೆ ವ್ಯಾಪಾರಸ್ಥರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುವ ಹಾಗೆ ಒಂದು ದೇಶ ಒಂದು ತೆರಿಗೆ ಕಾಯ್ದೆ ರಾಜ್ಯದಲ್ಲಿ ಕೂಡ ಜಾರಿಗೆ ಬರಲಿ ಎಂದು ಧಾರವಾಡ ದಲಾಲ್ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಒತ್ತಾಯಿಸಿದ್ದಾರೆ.