ಧಾರವಾಡ prajakiran.com : ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಕಾರ್ಮಿಕರ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಬೆಳಗ್ಗೆ ಭೇಟಿ ಮಾಡಿದರು.
ಕೃಷಿ ವಿಶ್ವವಿದ್ಯಾಲಯದ ಗುತ್ತಿಗೆ ಕಾರ್ಮಿಕರಾಗಿದ್ದ ಮೇಘನಾ ಶೇತವಾಜಿ ಸಿಂಗನಾಥ ಹಾಗೂ ರೇಖಾ ಕೊಕಟನೂರ ಅವರ ಸಾವಿನ ಬಗ್ಗೆ ಸಂಶಯವಿದೆ.
ಕುಲಪತಿಗಳ ಆಪ್ತ ಸಹಾಯಕ ಮನಸೂರ ಮುಲ್ಲಾ ಹಾಗೂ ಕೃಷಿ ವಿಶ್ವವಿದ್ಯಾಲಯದ ಸ್ಟೇನೋಗ್ರಾಫರ್ ಉಳವಪ್ಪ ಮೇಸ್ತ್ರಿ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪ್ರತಿಭಾ ಶಿವಾಜಿ ಗೊಂದಳಿ ಎಂಬುವರು ಉಪನಗರ ಠಾಣೆಯಲ್ಲಿ ಏ.೨೧ ರಂದು ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಕ್ಕೆ ಗುರಿಯಾಗಿರುವ ಮನಸೂರ ಮುಲ್ಲಾ ಹಾಗೂ ಉಳವಪ್ಪ ಮೇಸ್ತ್ರಿ ಅವರಿಬ್ಬರನ್ನು ಸರಳ ತನಿಖೆಗಾಗಿ ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು.
ಮೃತಪಟ್ಟ ಮೇಘನಾ ಸಿಂಗನಾಥ ಹಾಗೂ ರೇಖಾ ಕೊಕಟನೂರ ಅವರ ಕುಟುಂಬದವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸೂಕ್ತ ಪರಿಹಾರ ಮತ್ತು ಉದ್ಯೋಗ ಒದಗಿಸಬೇಕು.
ಇಲ್ಲದಿದ್ದರೆ ಸೋಮವಾರ ಕೃಷಿ ವಿಶ್ವವಿದ್ಯಾಲಯದ ಎದುರು ಪ್ರತ್ರಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮುಖಂಡರು ಕುಲಪತಿ ಡಾ.ಚೆಟ್ಟಿ ಅವರಿಗೆ ತಿಳಿಸಿದರು.
ಮುಖಂಡರ ಒತ್ತಾಯಕ್ಕೆ ಮಣಿದ ಕುಲಪತಿ ಡಾ.ಎಂ.ಬಿ.ಚೆಟ್ಟಿ ಅವರು ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಶ್ರೀರಾಮಸೇನೆಯ ಮುಖಂಡ ಪ್ರಮೋದ ಮುತಾಲಿಕ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಭಜರಂಗದಳ ಜಿಲ್ಲಾ ಸಂಚಾಲಕ ಶಿವಾನಂದ ಸತ್ತಿಗೇರಿ ಮತ್ತು ಅನೇಕ ಕಾರ್ಯಕರ್ತರು ಜೊತೆಯಲ್ಲಿದ್ದರು.